ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ (NDA) ಮೈತ್ರಿಕೂಟದ ಶಾಸಕರು ದೊಡ್ಡ ಮಟ್ಟದಲ್ಲಿ ಅಡ್ಡ ಮತದಾನ ಮಾಡಿರುವುದು ಬಿಜೆಪಿ ಹೈಕಮಾಂಡ್ ಅನ್ನು ತೀವ್ರ ಕೆರಳಿಸಿದೆ. ಜೆಡಿಎಸ್ ಅಭ್ಯರ್ಥಿಯ ಸೋಲು ಹಾಗೂ ಬಿಜೆಪಿಗೆ ಉಂಟಾದ ಮುಖಭಂಗವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ನಾಯಕರು, ರಾಜ್ಯದ ಪ್ರಮುಖ ನಾಯಕರಿಗೆ ತುರ್ತು ಬುಲಾವ್ ನೀಡಿದ್ದಾರೆ.
ಜೂನ್ 18 ರ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಸುಮಾರು 11 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ಕಾಂಗ್ರೆಸ್ನ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅನಿರೀಕ್ಷಿತ ಜಯ ಸಾಧಿಸಿದ್ದಾರೆ. ಈ ಆಂತರಿಕ ಸಂಘರ್ಷ ಬೀದಿಗೆ ಬಂದ ಹಿನ್ನೆಲೆಯಲ್ಲಿ, ಜೂನ್ 23 ರಂದು ದೆಹಲಿಗೆ ಬರುವಂತೆ ಮೂವರು ಪ್ರಮುಖ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ.
ಅಡ್ಡ ಮತದಾನದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಪಕ್ಷದ ನಿರ್ಧಾರ ಮೀರಿ ಆಟ ಆಡಿದವರನ್ನು ಸುಮ್ಮನೆ ಬಿಡಲ್ಲ" ಎಂದು ಎಚ್ಚರಿಸಿದ್ದಾರೆ. ದ್ರೋಹಿಗಳನ್ನು ಪತ್ತೆ ಹಚ್ಚಲು ಮಾಜಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ಮಹೇಶ್ ತೆಂಗಿನಕಾಯಿ ಮತ್ತು ಕೊಳ್ಳೆಗಾಲ ಮಹೇಶ್ ಅವರನ್ನೊಳಗೊಂಡ 3 ಸದಸ್ಯರ ವಿಶೇಷ ಸಮಿತಿಯನ್ನು ರಚಿಸಲಾಗಿದೆ.
ಮೂಲಗಳ ಪ್ರಕಾರ, ಈ ಕ್ರಾಸ್ ವೋಟಿಂಗ್ ಘಟನೆಯು ರಾಜ್ಯ ನಾಯಕತ್ವದ ಮೇಲಿನ ಹಿಡಿತ ಕೈತಪ್ಪುತ್ತಿರುವುದನ್ನು ಸಾಬೀತುಪಡಿಸಿದೆ. ಹೀಗಾಗಿ ಜೂನ್ 23 ರ ಹೈಕಮಾಂಡ್ ಸಭೆಯ ಬಳಿಕ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಪ್ರಮುಖ ಬದಲಾವಣೆ ತಂದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
PublicNext
19/06/2026 05:21 pm