ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಂಗಲ್ಯ ಸರ ಅಪಹರಣಕ್ಕೆ ಯತ್ನ: ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಕಳ್ಳನನ್ನು ಹಿಡಿದ ಸಾರ್ವಜನಿಕರು!

ಹೈದರಾಬಾದ್: ಹೈದರಾಬಾದ್‌ನ ಉಪ್ಪಲ್‌ನಲ್ಲಿ ಹಗಲು ಹೊತ್ತಿನಲ್ಲೇ ಗ್ರಾಹಕನ ಸೋಗಿನಲ್ಲಿ ಕಾಸ್ಮೆಟಿಕ್ ಅಂಗಡಿಯೊಂದರೊಳಗೆ ನುಗ್ಗಿದ ಕಳ್ಳನೊಬ್ಬ, ಮಹಿಳೆಯೊಬ್ಬರ ಮಂಗಲಸೂತ್ರ ಅಪಹರಣಕ್ಕೆ ಯತ್ನಿಸಿದ್ದಾನೆ. ಆದರೆ, ಸ್ಥಳೀಯರ ಸಮಯಪ್ರಜ್ಞೆ ಮತ್ತು ಧೈರ್ಯದಿಂದಾಗಿ, ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿದ ಸಾರ್ವಜನಿಕರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗುರುವಾರ ಮಧ್ಯಾಹ್ನ ಉಪ್ಪಲ್‌ನ ಹನುಮಾನ್ ಸಾಯಿನಗರದಲ್ಲಿ ನಡೆದ ಈ ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಮಂತಾಪುರದ ನಿವಾಸಿ, 35 ವರ್ಷದ ಕಾಸ್ಸುಲ ಸಂಧ್ಯಾ ಅವರು ಉಪ್ಪಲ್‌ನ ಕಾಸ್ಮೆಟಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಮಧ್ಯಾಹ್ನ ಸುಮಾರು 12:50ರ ಸುಮಾರಿಗೆ ಗ್ರಾಹಕನಂತೆ ಬಂದ ಅಪರಿಚಿತನೊಬ್ಬ ಫೇಸ್ ವಾಶ್ ಬೆಲೆ ಕೇಳಿದ್ದಾನೆ. ಸಂಧ್ಯಾ ಅವರು ಫೇಸ್ ವಾಶ್ ತೋರಿಸಲು ತಿರುಗಿದ ತಕ್ಷಣ, ಆತ ಅವರ ಕುತ್ತಿಗೆಯಲ್ಲಿದ್ದ ಸುಮಾರು 37 ಗ್ರಾಂ ತೂಕದ ಚಿನ್ನದ ಮಂಗಲಸೂತ್ರವನ್ನು ಕಿತ್ತುಕೊಂಡು ಓಡಲಾರಂಭಿಸಿದ್ದಾನೆ.

ಕಳ್ಳತನವಾದ ತಕ್ಷಣ ಎಚ್ಚೆತ್ತುಕೊಂಡ ಸಂಧ್ಯಾ, ಜೋರಾಗಿ ಕಿರುಚುತ್ತಾ ಕಳ್ಳನ ಬೆನ್ನಟ್ಟಿದ್ದಾರೆ. ಅಂಗಡಿಯಲ್ಲಿದ್ದ ಮತ್ತೊಬ್ಬ ಗ್ರಾಹಕ ಹಾಗೂ ಸ್ಥಳೀಯ ನಿವಾಸಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಳ್ಳನನ್ನು ಹಿಂಬಾಲಿಸಿದ್ದಾರೆ. ಕೊನೆಗೆ, ಉಪ್ಪಲ್ ಮಂಡೆ ಮಾರ್ಕೆಟ್ ಪ್ರದೇಶದಲ್ಲಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಸಾರ್ವಜನಿಕರು ಯಶಸ್ವಿಯಾಗಿದ್ದಾರೆ.

ಪೊಲೀಸ್ ತನಿಖೆಯ ವೇಳೆ ಆರೋಪಿಯನ್ನು ಕಾಮಾರೆಡ್ಡಿ ಜಿಲ್ಲೆಯ ಬಾನೋತು ಶ್ರೀನಿವಾಸ್ (21) ಎಂದು ಗುರುತಿಸಲಾಗಿದೆ. ಈತ ಹೈದರಾಬಾದ್‌ನ ಎಸ್‌ಆರ್ ನಗರದ ಹಾಸ್ಟೆಲ್‌ನಲ್ಲಿ ವಾಸವಿದ್ದು, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸರು ಆರೋಪಿಯಿಂದ ಕದ್ದ ಚಿನ್ನದ ಸರವನ್ನು ವಶಪಡಿಸಿಕೊಂಡು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಗಲು ಹೊತ್ತಿನಲ್ಲೇ ಧೈರ್ಯ ಪ್ರದರ್ಶಿಸಿ, ಕಳ್ಳನನ್ನು ಹಿಡಿಯಲು ನೆರವಾದ ಸಾರ್ವಜನಿಕರ ಸಮಯಪ್ರಜ್ಞೆಯನ್ನು ಉಪ್ಪಲ್ ಪೊಲೀಸರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Edited By : Vijay Kumar
PublicNext

PublicNext

20/06/2026 04:53 pm

Cinque Terre

4.9 K

Cinque Terre

0

ಸಂಬಂಧಿತ ಸುದ್ದಿ