ಬೆಂಗಳೂರು: ಕರ್ನಾಟಕದ ಕೈಗಾರಿಕೆ ಬೆಳವಣಿಗೆಯ ಪಯಣದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ದಾಖಲಾಗಿದೆ. ರಾಜ್ಯ ಮಟ್ಟದ ಉನ್ನತ ಮಟ್ಟದ ಅನುಮೋದನಾ ಸಮಿತಿ (SLSWCC) ಸಭೆಯಲ್ಲಿ ಒಟ್ಟು ₹7,506 ಕೋಟಿ ಹೂಡಿಕೆ ಮೌಲ್ಯದ 55 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ನೂತನ ಯೋಜನೆಗಳ ಮೂಲಕ ರಾಜ್ಯದ 28 ಸಾವಿರಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, "ಇದು ಕೇವಲ ಹೂಡಿಕೆಯ ಅಂಕಿ-ಅಂಶವಲ್ಲ, ಯುವಕರ ಭವಿಷ್ಯಕ್ಕೆ ಹೊಸ ಭರವಸೆ, ಕುಟುಂಬಗಳ ಬದುಕಿಗೆ ಹೊಸ ನೆಮ್ಮದಿ ಹಾಗೂ ಕರ್ನಾಟಕದ ಆರ್ಥಿಕ ಶಕ್ತಿಗೆ ಮತ್ತೊಂದು ಬಲಿಷ್ಠ ಅಡಿಗಲ್ಲು" ಎಂದು ಬಣ್ಣಿಸಿದ್ದಾರೆ.
'ಬಿಯಾಂಡ್ ಬೆಂಗಳೂರು' ಅಭಿವೃದ್ಧಿಗೆ ಒತ್ತು
ರಾಜ್ಯ ಸರ್ಕಾರವು ಕೇವಲ ರಾಜಧಾನಿಗೆ ಸೀಮಿತವಾಗದೆ, 'ಹೂಡಿಕೆ ಎಲ್ಲ ಜಿಲ್ಲೆಗಳತ್ತ, ಉದ್ಯೋಗ ಯುವಜನತೆಯತ್ತ' ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ಯೋಜನೆಗಳು ಬೆಂಗಳೂರಿನ ಆಚೆಗೂ (Beyond Bengaluru) ಇತರ ಜಿಲ್ಲೆಗಳಲ್ಲಿ ಕೈಗಾರಿಕಾ ವಿಕೇಂದ್ರೀಕರಣಕ್ಕೆ ಪೂರಕವಾಗಿರಲಿವೆ ಎಂಬ ಭರವಸೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.
ಉತ್ತಮ ಕೈಗಾರಿಕೆ ಪರಿಸರ ವ್ಯವಸ್ಥೆ, ಪಾರದರ್ಶಕ ಆಡಳಿತ, ತ್ವರಿತ ನಿರ್ಧಾರಗಳು ಮತ್ತು ಅತ್ಯುತ್ತಮ ಹೂಡಿಕೆ ಸ್ನೇಹಿ ನೀತಿಗಳ ಕಾರಣದಿಂದಾಗಿ ಕರ್ನಾಟಕವು ಇಂದು ದೇಶದಲ್ಲೇ ನಂಬರ್ 1 ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೆಮ್ಮೆಯಿಂದ ಹೇಳಿದ್ದಾರೆ.
PublicNext
20/06/2026 10:55 pm