ಚೆನ್ನೈ: ತಮಿಳುನಾಡಿನ ಪೊಲೀಸ್ ಪದಕ ಪ್ರದಾನ ಸಮಾರಂಭದಲ್ಲಿ ನಗು, ಶಿಸ್ತು ಹಾಗೂ ಮುದ್ದಾದ ಕ್ಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಂದ ಅತ್ಯುತ್ತಮ ಸೇವಾ ಪದಕ ಸ್ವೀಕರಿಸಿದ ಯುವ ಐಪಿಎಸ್ ಅಧಿಕಾರಿ ಭಾನು ನಾಗದೇವಿ ಅವರ ನಡೆ ಈಗ ಎಲ್ಲರ ಗಮನ ಸೆಳೆದಿದೆ.
ಹೌದು ಚೆನ್ನೈನ ರಾಜರತ್ನಂ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಪೊಲೀಸ್ ಪದಕ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಸಾಹಸ ಮತ್ತು ವಿಶಿಷ್ಟ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳಿಗೆ ಪದಕಗಳನ್ನು ಪ್ರದಾನ ಮಾಡಿದರು. ಈ ವೇಳೆ ಪದಕ ಸ್ವೀಕರಿಸಲು ವೇದಿಕೆಗೆ ಬಂದ IPS ಅಧಿಕಾರಿ ಭಾನು ನಾಗದೇವಿ, ಪದಕ ತೊಡಿಸಿಕೊಂಡ ತಕ್ಷಣವೇ ಗೌರವಪೂರ್ವಕವಾಗಿ ಮುಖ್ಯಮಂತ್ರಿಗಳಿಗೆ ಸೆಲ್ಯೂಟ್ ಹೊಡೆದರು. ಆದರೆ, ಪದಕ ಪಡೆದ ಮರುಕ್ಷಣವೇ ಅವರು ಫೋಟೋ/ವಿಡಿಯೋ ಚಿತ್ರೀಕರಿಸುತ್ತಿದ್ದ ಕ್ಯಾಮೆರಾ ಎಲ್ಲಿದೆ ಎಂದು ತಕ್ಷಣವೇ ಹುಡುಕಾಡ ತೊಡಗಿದರು.
ಯುವ ಅಧಿಕಾರಿಯ ಈ ಉತ್ಸಾಹ ಹಾಗೂ ಮುದ್ದಾದ ತರಾತುರಿಯನ್ನು ಗಮನಿಸಿದ ಮುಖ್ಯಮಂತ್ರಿ ವಿಜಯ್, ಮುಗುಳ್ನಗುತ್ತಾ ಸ್ವತಃ ಕ್ಯಾಮೆರಾದೆಡೆಗೆ ಬೆಟ್ಟು ಮಾಡಿ ತೋರಿಸಿದರು. ಸಿಎಂ ಅವರ ಈ ದಿಢೀರ್ ನಡೆಗೆ ಐಪಿಎಸ್ ಅಧಿಕಾರಿ ಭಾನು ನಾಗದೇವಿ ಅವರು ನಗುತ್ತಲೇ ಮತ್ತೊಮ್ಮೆ ವಿನಮ್ರವಾಗಿ ಸೆಲ್ಯೂಟ್ ಮಾಡಿ ಧನ್ಯವಾದ ತಿಳಿಸಿದರು.
ವೇದಿಕೆಯಲ್ಲಿ ನಡೆದ ಈ ಸರಳ ಹಾಗೂ ಸುಂದರ ಕ್ಷಣದ ವಿಡಿಯೋ ತುಣುಕುಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ನಲ್ಲಿದೆ. ನೆಟ್ಟಿಗರು "ಖಾಕಿ ಶಿಸ್ತಿನ ನಡುವೆಯೂ ಈ ಮುಗ್ಧ ನಗು ಮನಸ್ಸಿಗೆ ಮುದ ನೀಡುತ್ತದೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
PublicNext
05/08/2026 08:10 am
LOADING...