ನವದೆಹಲಿ / ಮುಂಬೈ: ಮುಂಬೈನಲ್ಲಿ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ಗೆ ಅಡ್ಡನಿಂತು ದೇಶದಾದ್ಯಂತ ತೀವ್ರ ಗಮನಸೆಳೆದಿದ್ದ ಮಾಡೆಲ್ ಹಾಗೂ ನಟಿ ರಿಯಾ ಅಹೀರ್ ಇದೀಗ ತಮ್ಮ ಮೇಲಾಗುತ್ತಿರುವ ನಿರಂತರ ಕಿರುಕುಳದ ವಿರುದ್ಧ ಧ್ವನಿ ಎತ್ತಿದ್ದಾರೆ.
ದೆಹಲಿಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ರಿಯಾ ಅಹೀರ್, ಮಾಧ್ಯಮಗಳು ಮತ್ತು ಸಾರ್ವಜನಿಕರು ತಮ್ಮ ಬಗ್ಗೆ ರೂಪಿಸುತ್ತಿರುವ ಕಥನಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ 'ಪೊಲೀಸ್ ವ್ಯಾನ್ ತಡೆದು ವೈರಲ್ ಆದ ಹುಡುಗಿ' ಎಂದು ನನ್ನನ್ನು ಬಿಂಬಿಸಲಾಗುತ್ತಿದೆ. ಆದರೆ ನಾನು ಕೇವಲ ವೈರಲ್ ಆಗಲು ಹಾಗೆ ಮಾಡಲಿಲ್ಲ, ಅಕ್ರಮವಾಗಿ ವಶಕ್ಕೆ ಪಡೆಯಲಾಗುತ್ತಿದ್ದ 20 ಅಮಾಯಕ ವಿದ್ಯಾರ್ಥಿಗಳನ್ನು ರಕ್ಷಿಸಲು ವ್ಯಾನ್ ಮುಂದೆ ನಿಂತೆ. ದಯವಿಟ್ಟು ನಿಮ್ಮ ದೃಷ್ಟಿಕೋನವನ್ನು ಬದಲಾಯಿಸಿ ಎಂದು ಮನವಿ ಮಾಡಿದ್ದಾರೆ. "ನನ್ನ ವಿರುದ್ಧ ಹೆಣೆಯಲಾಗುತ್ತಿರುವ ಸುಳ್ಳು ಕಥೆಗಳು ಹಾಗೂ ಬಳಸುತ್ತಿರುವ ಅಶ್ಲೀಲ ಪದಗಳು ಸಾಮಾನ್ಯ ಟ್ರೋಲಿಂಗ್ ಅಲ್ಲ, ಅದೊಂದು ಸೈಬರ್ ಅಪರಾಧ" ಎಂದು ಅವರು ಆಕ್ರೋಶ ಹೊರಹಾಕಿದರು.
ತಮಗೆ ಆಗುತ್ತಿರುವ ಸೈಬರ್ ಕಿರುಕುಳ ಹಾಗೂ ಬೆದರಿಕೆಗಳ ಕುರಿತು ಜುಲೈ 27 ರಂದೇ ಪೊಲೀಸರಿಗೆ ದೂರು ನೀಡಿದ್ದರೂ, ಆಗಸ್ಟ್ 5 ರವರೆಗೂ ಯಾವುದೇ FIR ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ. ಯಾವ ಯುವಕರಿಗಾಗಿ ನಾನು ಅಂದು ಪೊಲೀಸರ ವಿರುದ್ಧ ನಿಂತಿದ್ದೆನೋ, ಇಂದು ಆ ಎಲ್ಲಾ ಯುವಜನತೆ ಮತ್ತು ವಿದ್ಯಾರ್ಥಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಸಂತಸ ನನಗಿದೆ ಎಂದು ತಿಳಿಸಿದ್ದಾರೆ.
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳ ಮೇಲೆ ಪೋಲಿಸ್ ಬಲಪ್ರಯೋಗ ಮತ್ತು ಬೆದರಿಕೆ ತಂತ್ರ ಬಳಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಯುವಜನತೆ ದೇಶದ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾರೆ, ಅವರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
PublicNext
06/08/2026 09:29 am