ಮೈಸೂರು: ಟಿ.ನರಸೀಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆ ಹಾಗೂ ಧಮ್ಕಿ ಆರೋಪಕ್ಕೆ ಸಂಬಂಧಿಸಿದ ವಿವಾದ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇನ್ಸ್ಪೆಕ್ಟರ್ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸ್ಥಳೀಯ ವಾಹಿನಿಯ ಯುವಕ ಮಂಜುನಾಥ್ ವಿರುದ್ಧ FIR ದಾಖಲಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತನ್ನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 7ರಂದು ಪೊಲೀಸ್ ಠಾಣೆಯಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಲಿದೆ. ಈ ಸಭೆಗೆ ಬಂದು ವರದಿ ಮಾಡುವಂತೆ ಠಾಣೆಯಿಂದಲೇ ತನಗೆ ಕರೆ ಮಾಡಲಾಗಿತ್ತು. ಇದು ಕೇವಲ ಗಣೇಶೋತ್ಸವದ ಶಾಂತಿ ಸಭೆಗೆ ಮಾತ್ರ ಸೀಮಿತವಾಗಿರಲಿಲ್ಲ. ವಿವಿಧ ಪ್ರಕರಣಗಳ ಸಂದರ್ಭದಲ್ಲಿಯೂ ಇನ್ಸ್ಪೆಕ್ಟರ್ ಅವರು ಠಾಣೆಗೆ ಕರೆಸಿ ಸುದ್ದಿಮಾಡಿಸುವ ಮೂಲಕ ಪ್ರಚಾರ ಪಡೆಯುತ್ತಿದ್ದರು ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆಯೇ ತಾನು ವಿಡಿಯೋ ಮಾಡಿ ಪ್ರಸಾರ ಮಾಡಿದ್ದೇನೆ. ಯಾವುದೇ ರೀತಿಯಲ್ಲಿ ವಿಡಿಯೋವನ್ನು ತಿರುಚಿಲ್ಲ. ಅವರು ಹೇಳಿದ್ದನ್ನೇ ವಿಡಿಯೋ ಮಾಡಿ ಪ್ರಸಾರ ಮಾಡಿದ್ದೇನೆ. ಹಾಗಿದ್ದರೆ ಆ ಹೇಳಿಕೆಯನ್ನು ಪ್ರಸಾರ ಮಾಡಿದ ಕಾರಣಕ್ಕೆ ತನ್ನ ವಿರುದ್ಧ FIR ಏಕೆ ದಾಖಲಿಸಲಾಗಿದೆ? ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.
ವಿವಾದ ಉಂಟಾದ ಬಳಿಕ ತಾನು ಹಾಕಿದ್ದ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ. ಇದೀಗ ತಮ್ಮ ಮೇಲೆಯೇ ತಪ್ಪು ಹೊರಿಸಲಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆ ಸರಿಯೇ ಎಂದು ಸರ್ಕಾರದ ಪ್ರಮುಖರು ಸಮರ್ಥಿಸುತ್ತಿದ್ದರೆ, ಆ ಹೇಳಿಕೆಯನ್ನು ವಿಡಿಯೋ ಮಾಡಿ ಪ್ರಸಾರ ಮಾಡಿರುವುದು ಹೇಗೆ ತಪ್ಪಾಗುತ್ತದೆ? ಎಂದು ಮಂಜುನಾಥ್ ಪ್ರಶ್ನಿಸಿದ್ದಾರೆ.
ತಾನು ಯಾವುದೇ ವಿಡಿಯೋ ತಿರುಚಿಲ್ಲ, ಇನ್ಸ್ಪೆಕ್ಟರ್ ಹೇಳಿದ್ದನ್ನೇ ಪ್ರಸಾರ ಮಾಡಿದ್ದೇನೆ. ಆದ್ದರಿಂದ ಸರ್ಕಾರ ಕೂಡಲೇ ತಮ್ಮ ವಿರುದ್ಧ ದಾಖಲಾಗಿರುವ FIR ಅನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
PublicNext
17/09/2026 09:35 pm