ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸಬೇಕು ಎಂದು ರಾಜ್ಯ ಸರ್ಕಾರ ಮಾಡಿರುವ ಆದೇಶದಂತೆ, ಮುಂಬರುವ ಪಾಲಿಕೆಯ ಪರಿಷತ್ ಸಭೆಯ ಅಜೆಂಡಾದಲ್ಲಿ ಗೊತ್ತುವಳಿ ವಿಷಯವನ್ನು ಸೇರ್ಪಡೆ ಮಾಡಿರುವ ಅಥವಾ ಮಾಡದೆ ಇರುವ ಬಗ್ಗೆ ಆಯುಕ್ತರಿಂದ ವರದಿ ಪಡೆಯುವಂತೆ ಕನ್ನಡ ಸಂಘಟನೆಗಳು ಶುಕ್ರವಾರ ಮುಂಜಾನೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿವೆ.
ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಪಾಲಿಕೆಯ ಪರಿಷತ್ ಸಭೆ ನಡೆಯುವುದೆಂದು ನಿರೀಕ್ಷೆಯಿದೆ. ಸಭೆ ನಡೆಯುವ ಏಳು ದಿನ ಮೊದಲು ಅಜೆಂಡಾ ಸಿದ್ಧವಾಗಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ಪರವಾದ ಗೊತ್ತುವಳಿಯನ್ನು ಸೇರಿಸಬೇಕಾಗಿದೆ. ಮುಂದಿನ ವಾರದ ಆರಂಭದಲ್ಲಿ ಪರಿಷತ್ ಸಭೆಯ ವಿಷಯ ಪಟ್ಟಿ ಸಿದ್ಧವಾದ ಕೂಡಲೇ ಆಯುಕ್ತರಿಂದ ವರದಿ ಪಡೆದು ಸರ್ಕಾರಕ್ಕೆ ಕಳುಹಿಸಬೇಕೆಂದು ಕನ್ನಡ ಸಂಘಟನೆಗಳು ಮನವಿಯಲ್ಲಿ ಆಗ್ರಹಿಸಿವೆ.
ಕಳೆದ ವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಬೆಳಗಾವಿ ಪಾಲಿಕೆಯ ಕುರಿತು ನಡೆದ ಮಹತ್ವದ ಚರ್ಚೆಯ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ವಿವರಿಸಲಾಯಿತು.
ಕನ್ನಡ ಸಂಘಟನೆಗಳ ಮುಖಂಡರು ಪಾಲಿಕೆಯ ಆಯುಕ್ತರಾದ ಎಂ. ಕಾರ್ತಿಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ, ರಾಜ್ಯ ಸರ್ಕಾರದ ಆದೇಶವನ್ನು ಜಾರಿಗೆ ತರಬೇಕೆಂದು ಕೋರಿದರು. ಅಲ್ಲದೆ, ಮುಂಬರುವ ಪರಿಷತ್ ಸಭೆಯ ವಿಷಯ ಪಟ್ಟಿ ಪ್ರಕಟವಾದ ತಕ್ಷಣ ಸರ್ಕಾರಕ್ಕೆ ವರದಿ ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ತಾವು ಈಗಾಗಲೇ ಕರ್ನಾಟಕ ಪರವಾದ ಗೊತ್ತುವಳಿಯನ್ನು ವಿಷಯ ಪಟ್ಟಿಯಲ್ಲಿ ಸೇರಿಸುವಂತೆ ಕಡತವನ್ನು ಮಹಾಪೌರರಿಗೆ ಮಂಡಿಸಿದ್ದಾಗಿ ತಿಳಿಸಿದ ಆಯುಕ್ತರು, ವಿಷಯ ಪಟ್ಟಿ ಸಿದ್ಧವಾದ ಕೂಡಲೇ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಪೌರಾಡಳಿತ ನಿರ್ದೇಶಕರಿಗೆ ವರದಿ ಕಳುಹಿಸುವ ಭರವಸೆ ನೀಡಿದರು.
ಬೆಳಗಾವಿ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿಯನ್ನು ಅಂಗೀಕರಿಸುವ ಸಂಬಂಧ ರಾಜ್ಯ ಸರ್ಕಾರ ಎಷ್ಟೊಂದು ಗಂಭೀರವಾಗಿದೆ ಎಂಬುದನ್ನು ಮುಖಂಡರು ಆಯುಕ್ತರಿಗೆ ವಿವರಿಸಿದರು.
ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆಯ ಆಯುಕ್ತರಿಗೆ ಸಲ್ಲಿಸಿದ ಮನವಿಯ ಪ್ರತಿಗಳನ್ನು ಮಹಾಪೌರರು ಮತ್ತು ಉಪ ಮಹಾಪೌರರ ಕಾರ್ಯಾಲಯದ ಸಿಬ್ಬಂದಿಗೆ ತಲುಪಿಸಲಾಯಿತು.
ಮನವಿಯನ್ನು ಮುಖ್ಯಮಂತ್ರಿಗಳ ಕಚೇರಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಪೌರಾಡಳಿತ ನಿರ್ದೇಶಕರಿಗೂ ಇಂದೇ ಕಳುಹಿಸಲಾಗಿದೆ.
ಕನ್ನಡ ಸಂಘಟನೆಗಳ ಮುಖಂಡರಾದ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ನ್ಯಾಯವಾದಿಗಳಾದ ರವೀಂದ್ರ ತೋಟಿಗೇರ, ಬಾಳು ಮಾಲಾಜುರಿ, ಬಾಳಪ್ಪ ಗುಡಗೇನಟ್ಟಿ, ಮಲ್ಲಪ್ಪ ಗುಡಗೇನಟ್ಟಿ, ರಾಹುಲ್ ಭೋಸ್ಲೆ, ದೇವಾಂಗ ಮಹಿಳಾ ಮಂಡಲದ ಅಧ್ಯಕ್ಷೆ ಮಂದಾಕಿನಿ ಸುರೇಶ ಕುಡಚಿ, ಜೈ ಭುವನೇಶ್ವರಿ ಮಂಡಲದ ಅಧ್ಯಕ್ಷ ಭರಮಣ್ಣ ಮಣ್ಣೂರ, ಸಾಗರ ಪೂಜಾರಿ, ಸಂತೋಷ ತಳ್ಳಿಮನಿ, ಎಸ್.ಎಸ್. ಮೂಕನವರ, ಸಂತೋಷ ಮಾಸೇನಟ್ಟಿ, ಸುರೇಶ ಕುಡಚಿ, ಸಿದ್ಧಲಿಂಗ, ವೀರೇಂದ್ರ ಗೋಬರಿ ಮುಂತಾದವರು ಕನ್ನಡ ಸಂಘಟನೆಗಳ ನಿಯೋಗದಲ್ಲಿದ್ದರು.
PublicNext
19/09/2026 11:43 am