ಯರಗಟ್ಟಿ : ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ಪ್ರಕರಣ ನಡೆದಿದೆ. ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ನಿಮ್ಮ ತಂದೆಗೆ ಬುದ್ಧಿ ಹೇಳು ಎನ್ನುತ್ತಿದ್ದಂತೆ 15ಕ್ಕೂ ಹೆಚ್ಚು ಜನರ ಗುಂಪು ರಾತ್ರಿ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದೆ. ಹಲ್ಲೆಯಿಂದ ರುದ್ರಪ್ಪ ಸೇರಿ ಅವರ ಕುಟುಂಬದ ಮಕ್ಕಳು, ತಂದೆ-ತಾಯಿಗೂ ಗಂಭೀರ ಗಾಯಗಳಾಗಿವೆ.
ಹೌದು ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಅಂತ್ಯಕ್ರಿಯೆ ಸಂದರ್ಭದಲ್ಲಿ ಆರೋಪಿಯ ತಂದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರಂತೆ. ಈ ವೇಳೆ ರುದ್ರಪ್ಪ ಅವರು ನಿಮ್ಮ ತಂದೆಗೆ ಬುದ್ಧಿ ಹೇಳಿ ಎಂದು ಆರೋಪಿಗೆ ತಿಳಿಸಿದ್ದರಂತೆ.
ಇದರಿಂದ ಕೋಪಿತರಾಗಿ ರಾತ್ರಿ ವೇಳೆ ಏಕಾಏಕಿ 15ಕ್ಕಿಂತ ಹೆಚ್ಚು ಜನರ ಗುಂಪು ರುದ್ರಪ್ಪ ಅವರ ಮನೆಗೆ ನುಗ್ಗಿದೆ. ಮನೆ ಬಾಗಿಲನ್ನು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕಬ್ಬಿಣದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ರುದ್ರಪ್ಪ, ಅವರ ಸಣ್ಣ ಮಕ್ಕಳು, ತಂದೆ-ತಾಯಿ ಮೇಲೂ ಹಲ್ಲೆ ಮಾಡಲಾಗಿದೆ. ಕೈ, ಕಾಲು, ತಲೆ, ಬೆನ್ನಿಗೆ ಗಂಭೀರ ಗಾಯಗಳಾಗಿವೆ.
ಇನ್ನೂ ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳು ಮನೆ ಮುಂದೆಯೇ ಓಡಾಡುತ್ತಿದ್ದು ಭಯದಲ್ಲಿದ್ದೇವೆ, ತಕ್ಷಣ ಬಂಧಿಸಿ ನ್ಯಾಯ ಕೊಡಿಸಿ ಎಂದು ಹಲ್ಲೆಗೊಳಗಾದ ರುದ್ರಪ್ಪ ಮನವಿ ಮಾಡಿದ್ದಾರೆ.
PublicNext
20/09/2026 02:58 pm
LOADING...