ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ, ಅಮಿತ್ ಶಾ ವಕ್ಫ್ ಆಸ್ತಿ ಕೊಳ್ಳೆಹೊಡೆಯಲು ಹೊರಟಿದ್ದಾರೆ: ಎಂ.ಲಕ್ಷ್ಮಣ್

ಚಾಮರಾಜನಗರ: ನರೇಂದ್ರಮೋದಿ ಮತ್ತು ಅಮಿತ್ ಹಾ ವಕ್ಫ್ ಆಸ್ತಿಯನ್ನು ಕೊಳ್ಳೆಹೊಡೆಯಲು ಹೊರಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದ ಈಧ್ಗಾ ಮೈದಾನದಲ್ಲಿ ಅಲ್ ಇಂಡಿಯಾ ಮುಸ್ಲಿಂ ಕಾನೂನು ಸಮಿತಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಮತ್ತು ಅಮಿತ್ ಶಾ ವಕ್ಫ್ ಆಸ್ತಿಯನ್ನು ಕೊಳ್ಳೆಹೊಡೆದು ಇಬ್ಬರು ವ್ಯಾಪಾರಿಗಳಿಗೆ ಕೊಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ದೇಶವನ್ನು ಲೂಟಿ ಮಾಡಿ ಕೊಳ್ಳೆಹೊಡೆಯಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿ, ಆರ್‌ಎಸ್‌ಎಸ್ , ಮುಸ್ಲಿಂ ಸಮುದಾಯವನ್ನು ದ್ವೇಷಿಸುತ್ತಿದೆ. ಜಾತಿ, ಜಾತಿ ಹೊಡೆಯುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದರು.

ವಕ್ಫ್ ಕಾಯ್ದೆ ಬಿಲ್ ಅನ್ನು ತಂದು ಆ.8ಕ್ಕೆ ಒಂದು ವರ್ಷವಾಗಲಿದೆ. ಕಾನೂನು ಆಗಿ ಜಾರಿಯಾಯಿತು. ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಿ ಕಾನೂನು ಮಾಡಿ ತಂದಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡದಿದ್ದರೆ ಈದ್ಗಾ ಮೈದಾನಕ್ಕೆ ಬಿಜೆಪಿಯವರು ಬೇಲಿ ಹಾಕಿಬಿಡುತ್ತಿದ್ದರು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಏನಾದರೂ ಬಿಜೆಪಿ ಸರ್ಕಾರ ಬಂದರೆ ನೂರಕ್ಕೆ ನೂರಷ್ಟು ಬೇಲಿ ಹಾಕುತ್ತಾರೆ. ಕಾನೂನು ಕರಾಳವಾಗಿದೆ. ಕಾನೂನು ಜಾರಿಯಾದರೆ ಮಸೀದಿಯಲ್ಲಿ ನಮಾಜ್ ಮಾಡಲು ಜಿಲ್ಲಾಧಿಕಾರಿ ಅನುಮತಿ ಕೇಳಬೇಕಾಗುತ್ತದೆ ಎಂದರು.

ಮುಸ್ಲಿಂ ಸಮುದಾಯದವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಕೊಡುಗೆ ನೀಡಿದ್ದಾರೆ. ಅಂತಹ ಧರ್ಮಕ್ಕೆ ಮತದಾನ ಹಕ್ಕು ಇಲ್ಲದಂತೆ ಮಾಡುವ ಹುನ್ನಾರ ನಡೆಯುತ್ತಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿಮ್ಮ ಪರ ಇದೆ. ವಕ್ಫ್ ಮಸೂದೆ ವಿರುದ್ಧ ದೊಡ್ಡಮಟ್ಟದಲ್ಲಿ ಆಂದೋಲನ ಆಗಬೇಕು. ನಿಮ್ಮ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಇದೆ ಎಂದರು.

ಅಂಕಣಕಾರ, ಸಾಮಾಜಿಕ ಚಿಂತಕ ಶಿವಸುಂದರ್ ಮಾತನಾಡಿ, ದೇಶದಲ್ಲಿ ಅಣ್ಣ ತಮ್ಮಂದಿರಂತೆ ಬದುಕುತ್ತಿರುವ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷದ ಬೀಜ ಬಿತ್ತುವ ಮೂಲಕ ತಮ್ಮ ರಾಜಕೀಯ ಬೇಳೆ. ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮುಸ್ಲಿಮರು ಬಿಜೆಪಿಗೆ ಆಕ್ಸಿಜನ್ ಇದ್ದಂತೆ: ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಮಾತನಾಡಿ,  ಮುಸ್ಲಿಮರು ಬಿಜೆಪಿಗೆ ಆಮ್ಲಜನಕ ಇದ್ದಂತೆ. ವಕ್ಪ್ ಕಾಯ್ದೆಗೆ ತಿದ್ದುಪಡಿ ತಂದು ನಮ್ಮ ಹಕ್ಕುಗಳನ್ನು‌ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಬಿಜೆಪಿ ಬದುಕಬೇಕಾದರೆ ಮುಸ್ಲಿಂ ಬೇಕು. ಮುಸ್ಲಿಮರ ಹೆಸರು  ಬಳಸದೇ ಹೋದರೆ ಅವರು ಒಂದು ಗ್ರಾಮ ಸದಸ್ಯ ಸ್ಥಾನವನ್ನು ಗೆಲ್ಲುವ ಶಕ್ತಿ ಇಲ್ಲ ಎಂದರು.

ಸಮಾವೇಶದಲ್ಲಿ ಮುಫ್ತಿ ಜಾಫರ್ ಹುಸೇನ್ ಸಾಹೇಬ್, ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಸದಸ್ಯರಾದ ಮೌಲಾನ ತನ್ವೀರ್ ಹಾಸ್ಮಿ ಸಾಹೇಬ್, ಮುಫ್ತಿ ಇಫ್ತೆಖಾರ್ ಸಾಹೇಬ್, ಮೌಲಾನ ಖಾರಿ ಸಲ್ಮಾನ್ ಸಾಹೇಬ್, ಮೌಲ್ವಿ ಆರಿಫ್ ಸಾಹೇಬ್ ತಾಳವಾಡಿ, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಮಾಜಿ ಅಧ್ಯಕ್ಷ ಸೈಯದ್ ರಫೀ, ಅಬ್ರಾರ್ ಅಹಮದ್ ಸೇರಿದಂತೆ ಇತರರು ಇದ್ದರು.

29ಸಿಎಚ್ಎನ್.1: ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಮೀಪದ ಈಧ್ಗಾ ಮೈದಾನದಲ್ಲಿ ವಕ್ಪ್ ಕಾಯ್ದೆ ತಿದ್ದುಪಡಿ ಮಸೂದೆ ವಿರೋಧಿಸಿ ನಡೆದ ಜಿಲ್ಲಾ ಮಟ್ಟದ ಬೃಹತ್ ಸಮಾವೇಶವನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಉದ್ಘಾಟಿಸಿದರು.

Edited By : PublicNext Desk
Kshetra Samachara

Kshetra Samachara

29/06/2025 04:39 pm

Cinque Terre

580

Cinque Terre

0

ಸಂಬಂಧಿತ ಸುದ್ದಿ