ಚಾಮರಾಜನಗರ :ಅಸಮಾನತೆಯನ್ನು ತೊಡೆದು ಹಾಕಿ ಸಮ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ಮಹಾನ್ ವ್ಯಕ್ತಿ ಡಾ.ಬಿ.ಆರ್ ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇ ಡ್ಕರ್ 134ನೇ ಜನ್ಮ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನವನ್ನು ದುರ್ಬಲ ಗೊಳಿಸುವ ಕೆಲಸ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಯೊಬ್ಬರು ಹೋರಾಟ ಮಾಡಬೇಕು ಎಂದು ತಿಳಿಸಿದರು.
ಸ್ವಾತಂತ್ರ ಬಂದು 75 ವರ್ಷ ಕಳದರು ಅಂಬೇಡ್ಕರ್ ಸಂವಿಧಾನ ಬಯಸಿದಷ್ಟು ಬದಲಾವಣೆಗಳಾಗಿಲ್ಲ. ಸಂವಿಧಾನದಲ್ಲಿ ನಾವೆಲ್ಲರೂ ಭಾರತೀಯರೆಂದು ಹೇಳಿದ್ದಾರೆ ವಿನಃ ಹಿಂದೂ, ಮುಸ್ಲಿಂ, ಕ್ರೈಸ್ತ ಎಂದಿಲ್ಲ. ಜತೆಗೆ ಸ್ವಾತಂತ್ರ್ಯ, ಸಮಾನತೆ ಇನ್ನೂ ಪೂರ್ಣವಾಗಿ ಸಿಕ್ಕಿಲ್ಲ. ಆದ್ದರಿಂದ ಭಾರತದ ಮೂಲ ನಿವಾಸಿಗಳಾದ ನಾವು ಸ್ವಾತಂತ್ರ್ಯ ಬಯಸುತ್ತಿದ್ದೇವೆ. ನಮಗೆ ಸ್ವಾಭಿಮಾನ, ಘನತೆ, ಗೌರವ, ಸ್ಥಾನಮಾನ ಬೇಕು. ಇಂದಿಗೂ ಅಸಮಾನತೆ ತಾಂಡವವಾಡುತ್ತಿದ್ದು, ಆದ್ದರಿಂದ ಅಸಮಾನತೆ ತೊಡದು ಹಾಕಬೇಕು ಎಂದು ಹೇಳಿದರು.
ದೇಶದಲ್ಲಿ ಏಕತೆ ಮತ್ತು ಸಮಗ್ರತೆ ಒಂದಾಗಿಬೇಕು ಎನ್ನುವ ದೃಷ್ಟಿಯಿಂದ ಅಂಬೇಡ್ಕರ್ ದೇಶದ 140 ಕೋಟಿ ಜನರಿಗೆ ಹಕ್ಕು, ರಕ್ಷಣೆಯನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಆದರೆ ಅಂಬೇಡ್ಕರ್ ರನ್ನು ದಲಿತ ಮತ್ತು ಮೀಸಲಾತಿಗೆ ಸೀಮಿತ ಮಾಡಿದ್ದಾರೆ. 500 ವರ್ಷಗಳ ಹಿಂದೆ ಬೌದ್ಧ ಬಿಕ್ಕುಗಳ ಮೂಲಕ ಬುದ್ಧ ಪ್ರಜಾಪ್ರಭುತ್ವ ಬೀಜ ಬಿತ್ತಿದರು. ಅದು 12ನೇ ಶತಮಾನದಲ್ಲಿ ಬಸವಣ್ಣನ ಅನುಭವ ಮಂಟಪದಲ್ಲಿ ಮರವಾಗಿ ಬೆಳೆಯಿತು. ಅಂಬೇಡ್ಕರ್ ಸಂವಿಧಾನದ ಮೂಲಕ ವಯಸ್ಕರಿಗೆ ಮತದಾನದ ಹಕ್ಕು ಕೊಟ್ಟ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ್ಣಾಯಿತು. ಈ ಮೂಲಕ ಸ್ವಾಭಿಮಾನದ ಬದುಕು ಬಯಸುವವರು ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ನೆನೆಯುತ್ತೆವೆ ಎಂದು ತಿಳಿಸಿದರು.
ಮನುಧರ್ಮದ ಅನುಷ್ಠಾನ ಆರ್ ಎಸ್ಎಸ್ ಸಿದ್ದಾಂತವಾಗಿದೆ. ಇಂದು ಪ್ರಜಾಪ್ರಭುತ್ವ ಅಪಾಯ ದಲ್ಲಿದ್ದು, ಮನುವಾದವನ್ನು ಜನರ ಮೇಲೆ ಏರಿ ನಾವೆಲ್ಲ ಗುಲಾಮರಂತೆ ಕೆಲಸ ಮಾಡಲು ಯೋಜನೆಗಳ್ನು ರೂಪಿಸಲಾಗುತ್ತಿದೆ. ಜತೆಗೆ ಸಂವಿಧಾನ ಬದಲಾವಣೆ ಮಾಡಬೇಕು ಎಂದು ಅನೇಕ ಪ್ರಯತ್ನಗಳು ನಡೆದಿವೆ. ಇದು ಸಫಲವಾಗುವುದಿಲ್ಲ. ಕಾಂಗ್ರೆಸ್ ಸರ್ಕಾರವು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳುವವರಿಂದಲೇ ಸಂವಿಧಾನ ಪೀಠಿಕೆ ಓದುವಂತೆ ಮಾಡಿದೆ ಎಂದರು.
Kshetra Samachara
29/06/2025 06:40 pm