ಚನ್ನಮ್ಮನ ಕಿತ್ತೂರು: ಅಲ್ಲಿ ಮದುವೆ ಮಂಟಪವಿರಲಿಲ್ಲ, ಗಟ್ಟಿ ಮೇಳದ ಸದ್ದಿರಲಿಲ್ಲ, ಬಂಧುಗಳು - ನೆಂಟರು ಹೊಸ ಬಟ್ಟೆ ತೊಟ್ಟಿರಲಿಲ್ಲ. ಆದರೂ ಅಲ್ಲಿ ಮದುವೆ ಮನೆಯ ಸಂಭ್ರಮ ಮೇಳೈಸಿತ್ತು.
ನಿಂತ ನೆಲವೇ ಮದುವೆ ವೇದಿಕೆಯಾಯ್ತು, ಸಹ ಕಾರ್ಮಿಕರು ನೆಂಟರಿಷ್ಟರಾದರು, ಸುತ್ತಲಿನ ಪರಿಸರವೇ ಹಸಿರು ತೋರಣ ಕಟ್ಟಿದಂತಿತ್ತು.. ವಧು, ವರರು ಪರಸ್ಪರ ಮಾಲೆ ಬದಲಿಸಿದರು. ಕಾರ್ಮಿಕರ ಬುಟ್ಟಿಗಳೇ ಗಟ್ಟಿ ಮೇಳ ತಟ್ಟಿದವು. ಈ ಅಪರೂಪದ ಮದುವೆಗೆ ಅಲ್ಲಿದ್ದವರೆಲ್ಲ ಸಾಕ್ಷಿಯಾದರು. ಹೇಂಗಂತೀರಾ.. ಈ ಸ್ಟೋರಿ ನೋಡಿ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕು ದಾಸ್ತಿಕೊಪ್ಪ ಗ್ರಾಮದ ಹೊರವಲಯದಲ್ಲಿ ರುದ್ರಪ್ಪ ಗಂಗಪ್ಪ ತಿಗಡಿ ಮತ್ತು ಬಸವ್ವ ರುದ್ರಪ್ಪ ತಿಗಡಿ ದಂಪತಿಗಳಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ನರೇಗಾ ಕೂಲಿ ಕಾರ್ಮಿಕರು ಸೇರಿ ಇವರಿಬ್ಬರಿಗೂ ಮರು ಮದುವೆ ಮಾಡಿಸುವ ಮೂಲಕ ದಂಪತಿಯನ್ನು ಖುಷಿ ಪಡಿಸಿದರು. ಈ ಸಂಭ್ರಮದಲ್ಲಿ ಸಂಗಡಿಗರೂ ಪಾಲ್ಗೊಂಡು ಸಂಭ್ರಮ ಪಟ್ಟರು.
ಸಾಂಪ್ರದಾಯಿಕ ಮದುವೆಯ ಮಾದರಿಯಲ್ಲೇ ವಧುವಿನ ಎದಿರು ಗೊಳ್ಳುವಿಕೆ, ಸೋಬಾನೆ ಹಾಡುಗಳ ವೈಭವ ನಡೆಯಿತು. ಸುರಿಗೆ ನೀರೆರೆದು ವಧುವರರನ್ನು ತೋಯ್ದು ತೊಪ್ಪೆಯಾಗಿಸಿದರು. ಕಾರ್ಮಿಕರೆಲ್ಲ ಸೇರಿಸಿ ಮದುವೆಯ ವಾರ್ಷಿಕೋತ್ಸವ ದಿನ ಆಚರಿಸಿ ಸಂಭ್ರಮಿಸಿದರು. ದಂಪತಿಗಳಿಗೆ ಮತೊಮ್ಮೆ ಮದುವೆಯ ಸಡಗರದ ಕಳೆದ ಕ್ಷಣಗಳನ್ನು ಮೆಲುಕು ಹಾಕುವಂತೆ ಮಾಡಿದರು. ವಧೂವರರ ಮುಖದಲ್ಲೂ ಅಂದಿನ ನಾಚಿಕೆ ಇಣುಕಿ ಮಾಯವಾದಂತಿತ್ತು!
ಶೇಖರ ಕಲ್ಲೂರ ಪಬ್ಲಿಕ್ ನೆಕ್ಸ್ಟ್ ಚನ್ನಮ್ಮನ ಕಿತ್ತೂರು
PublicNext
29/06/2025 05:33 pm