ರಾಯಚೂರು: ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ವಿಚಾರಗಳಿಗೆ ಮಹತ್ವದ ಕೆಡಿಪಿ ಸಭೆ ಈ ಬಾರಿ ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದೆ.
ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ, ಒಂದು ಕಡೆ ಸಚಿವರು ಹಾಗೂ ಶಾಸಕರು ಪರಸ್ಪರ ವಾಗ್ವಾದ ನಡೆಸುತ್ತಿದ್ರೆ, ಇನ್ನೊಂದೆಡೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ, ಸಭೆಯ ಮಧ್ಯೆ ಮೊಬೈಲ್ನಲ್ಲಿ ರಮ್ಮಿ ಆಡುತ್ತಿರುವ ದೃಶ್ಯ ಮಾಧ್ಯಮದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್, ಸಭೆಯ ಗಂಭೀರತೆಯ ಬಗ್ಗೆ ಕನಿಷ್ಠ ಗೌರವವನ್ನೂ ತೋರಿಸದೆ, ತನ್ನ ಮೊಬೈಲ್ನಲ್ಲಿ ರಮ್ಮಿ ಆಟದಲ್ಲಿ ತಲ್ಲೀನರಾಗಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ದೃಶ್ಯ ವೈರಲ್ ಆದ ತಕ್ಷಣವೇ ಸಭೆಯಲ್ಲಿ ಹಾಜರಿದ್ದ ಸಚಿವರು ಮತ್ತು ಶಾಸಕರಿಗೂ ಈ ವಿಷಯ ತಿಳಿಯಿತು. ತಕ್ಷಣವೇ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಈ ಘಟನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಯ ನಿರ್ಲಕ್ಷ್ಯತೆಯು ಅಧೀಕ್ಷಣಾರ್ಹವಲ್ಲ ಎಂದು ಆಕ್ಷೇಪಿಸಿದರು.
ಪ್ರವೀಣ್ ಅವರನ್ನು ಸಭೆಯಿಂದ ಹೊರಹಾಕಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗೆ ಸೂಚಿಸಿದರು.
"ಸಭೆ ಸಮಯದಲ್ಲಿ ಇಂತಹ ನಡವಳಿಕೆ ಖಂಡನಾರ್ಹ. ಸರ್ಕಾರದ ಶಿಸ್ತಿಗೆ ಬದ್ಧರಾಗದವರಿಗೆ ಸಹಿಷ್ಣುತೆ ಇಲ್ಲ. ಇಂಥ ಘಟನೆಗಳು ಮುಂದಿನ ಸಭೆಗಳಲ್ಲಿ ಪುನರಾವರ್ತನೆ ಆಗಬಾರದು," ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದೆಲ್ಲವನ್ನೂ ನೋಡುತ್ತ ಕುಳಿತಿದ್ದ ಅಧಿಕಾರಿಗಳಲ್ಲಿ ಒಬ್ಬರು ಮೂಗಲ್ಲಿ ತೋರು ಬೆರಳು, ಇನ್ನೊಬ್ಬರು ಕಿವಿಯಲ್ಲಿ ಪೆನ್ನು ಹಾಕಿ ತಿರುವಿಕೊಳ್ಳುತ್ತಿದ್ದರು. ಪತ್ರಕರ್ತರ ಆಸನದಲ್ಲೂ ಪತ್ರಕರ್ತರಲ್ಲದವರು ಬಂದು ಕುಳಿತಿದ್ದರು. ಜಾಗ ಇಲ್ಲದ ಕಾರಣ ಪತ್ರಕರ್ತರು ಶಾಸಕರ ಜಾಗದಲ್ಲಿ ಕುಳಿತುಕೊಂಡಿದ್ದರು. ಒಟ್ಟಾರೆ ಸಭೆ ಅವ್ಯವಸ್ಥೆಯ ಗೂಡಾಗಿತ್ತು.
PublicNext
18/07/2025 10:36 pm