ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇದೀಗ 15 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಹುಡುಗಿಯ ಅನುಮಾನಾಸ್ಪದ ಸಾವಿನ ಸಂಬಂಧಿತವಾಗಿ ಹೊಸ ದೂರು ಮತ್ತು ಮಹತ್ವದ ಸಾಕ್ಷ್ಯಗಳು ಹೊರಬಿದ್ದಿವೆ.
ಇಂದು( ಶನಿವಾರ) ಸಂಜೆ ವೇಳೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಸಾಮಾಜಿಕ ಕಾರ್ಯಕರ್ತ ಜಯನ್ ಟಿ ಅವರು ಭೇಟಿ ನೀಡಿ, ತನಿಖಾ ತಂಡಕ್ಕೆ ದೂರು ಸಲ್ಲಿಸಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ, 15 ವರ್ಷಗಳ ಹಿಂದೆ ಸಾವನ್ನಪ್ಪಿದ ಹುಡುಗಿಯ ಶವವನ್ನು ಕಾನೂನಾತ್ಮಕ ವಿಧಾನಗಳನ್ನು ಅನುಸರಿಸದೇ ಹೂಳಲಾಗಿತ್ತು ಎಂದು ಹೇಳಿದ್ದಾರೆ.
"ಆ ಹುಡುಗಿಯ ಶವವನ್ನು ನಾನು ಸ್ಪಷ್ಟವಾಗಿ ನೋಡಿದ್ದೇನೆ. ಶವ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಇತ್ತು. ಹೂಳಲಾದ ಸ್ಥಳವೂ ನನಗೆ ತಿಳಿದಿದೆ. ನಾನು ಶವ ಹೂಳುವ ಸ್ಥಳಕ್ಕೆ ಸಾಕ್ಷಿಯಾಗಿದ್ದೇನೆ. ಕೊಲೆ ಆಗಿದೆಯೇ ಅಥವಾ ಇಲ್ಲವೇ ಎನ್ನುವುದು ನನಗೆ ಗೊತ್ತಿಲ್ಲ, ಆದರೆ ನ್ಯಾಯ ಸಂಪೂರ್ಣವಾಗಿ ದೊರಕಿಲ್ಲ ಎಂಬ ನಂಬಿಕೆಯಿದೆ" ಎಂದು ಜಯನ್ ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜಯನ್ ಟಿ ಅವರು 1986ರಲ್ಲಿ ಕೊಲೆಯಾದ ಪದ್ಮಲತಾ ಅವರ ಸಂಬಂಧಿಯೂ ಆಗಿದ್ದು, ಈ ಹಿಂದಿನ ಪ್ರಕರಣಕ್ಕೂ ಸಂಬಂಧ ಹೊಂದಿರುವ ಸಾಧ್ಯತೆವಿದೆ "ಈ ಹಿಂದೆ ನ್ಯಾಯ ಸಿಗಲಿಲ್ಲ, ಆದರೆ ಈಗ ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಮೇಲೆ ನನಗೆ ನಂಬಿಕೆ ಇದೆ. ಪಾರದರ್ಶಕ ತನಿಖೆ ನಡೆಯಲಿದೆ ಎನ್ನುವ ಭರವಸೆಯೂ ಇದೆ. ಮುಂದಿನ ದಿನಗಳಲ್ಲಿ ಇಂತಹ ಅನುಭವಗಳನ್ನು ಹಂಚಿಕೊಳ್ಳಲು ಇನ್ನೂ ಹಲವರು ಮುಂದೆ ಬರಬಹುದು. ಎಸ್ಐಟಿ ಅಧಿಕಾರಿಗಳು ಸೋಮವಾರ ಮತ್ತೆ ಬರುವಂತೆ ಕೇಳಿದ್ದಾರೆ. ನಾನು ಎಲ್ಲ ವಿವರಗಳನ್ನು ಅವರಿಗೆ ಸಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.
PublicNext
02/08/2025 10:04 pm