ದಾವಣಗೆರೆ : ಹಿಂದೂ- ಮುಸ್ಲಿಂ ಯಾರೇ ಆಗಿರಲಿ, ಎಲ್ಲರೂ ನೆಮ್ಮದಿ ಹಾಗೂ ಸಾಮರಸ್ಯದಿಂದ ಬಾಳಬೇಕು. ಯಾರೇ ಆಗಿರಲಿ ಎಲ್ಲಾದರೂ ಕಾಲು ಕೆರೆದು ಜಗಳ ಮಾಡಿದರೆ ನಾನಂತೂ ಸುಮ್ಮನಿರಲ್ಲ. ಒಳಗೆ ಹಾಕಿಸುತ್ತೇನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದರು.
ಮಟ್ಟಿಕಲ್ಲು ಪ್ರದೇಶದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ವಿವಾದಿತ ಫ್ಲೆಕ್ಸ್ ತೆರವಿಗೆ ವಿರೋಧಿಸಿರುವ ಹಿನ್ನೆಲೆಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಹಿಂದೂ ಜಾಗರಣಾ ವೇದಿಕೆ ಸತೀಶ್ ಪೂಜಾರಿ ಕುರಿತು ಮಾತನಾಡಿದ ಸಚಿವರು, ಅವರಿಗೆ ಬೇರೆ ಕೆಲಸವೇ ಇಲ್ಲವೇನು? ಬಾ ನನ್ನ ಮನೆ ಮುಂದೆ, ಫ್ಲೆಕ್ಸ್ಗಳನ್ನು ಹಾಕಿಸು. ಮಟ್ಟಿಕಲ್ಲು ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಎಲ್ಲರೂ ಇದ್ದಾರೆ. ಅಲ್ಲಿ ಹೋಗಿ ಮುಸ್ಲಿಮರ ಮನೆ ಮುಂದೆಯೇ ಫ್ಲೆಕ್ಸ್ ಹಾಕಬೇಕಾ? ಅಲ್ಲಿ ಅವತ್ತು ಒಬ್ಬನೇ ಒಬ್ಬ ಮುಸ್ಲಿಂ ಇದ್ದಿದ್ದರೂ ದೊಡ್ಡ ರಂಪರಾಡಿ ಮಾಡುತ್ತಿದ್ದರು. ಮುಸ್ಲಿಮರು ಬರಲಿ ಬರಲಿ ಅಂತಲೇ ಕಾಯುತ್ತಿದ್ದರು ಎಂದು ಸಚಿವರು ಕಿಡಿಕಾರಿದರು.
ಹಿಂದೂಗಳಾಗಲೀ, ಮುಸ್ಲಿಮರಾಗಲೀ ದಾವಣಗೆರೆಯಲ್ಲಿ ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದಾರೆ. ಅದನ್ನು ಹಾಳು ಮಾಡುವುದು ಬೇಡ. 1994ರಲ್ಲಿ ಆಗಿದ್ದನ್ನೆಲ್ಲಾ ನಾವು, ನೀವುಗಳೂ ನೋಡಿದ್ದೇವೆ. ಅಂತಹದ್ದೆಲ್ಲಾ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು.
PublicNext
02/09/2025 07:16 pm