ವಿಜಯಪುರ ನಗರದಲ್ಲಿ ಪರಿಸರ ಮತ್ತು ಸ್ಮಾರಕಗಳ ರಕ್ಷಣೆ ಹಾಗೂ ಅವುಗಳ ಮಹತ್ವ ಸಾರುವ ಸದುದ್ದೇಶದೊಂದಿಗೆ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್ನ ಆರನೇ ಆವೃತ್ತಿಗೆ ಭಾನುವಾರ ಅದ್ಧೂರಿ ಚಾಲನೆ ದೊರೆಯಲಿದೆ. ಈ ಮ್ಯಾರಥಾನ್ನಲ್ಲಿ ಭಾಗವಹಿಸಲು ಕನಿಷ್ಠ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿಯ ವಿಶೇಷವೆಂದರೆ, ಮುದ್ದು ಮಕ್ಕಳು ಕೂಡ ಪ್ರಕೃತಿ ಸಂರಕ್ಷಣೆಯ ಸಂಕಲ್ಪದಲ್ಲಿ ಪಾಲ್ಗೊಳ್ಳಬೇಕೆಂಬ ಸದುದ್ದೇಶದೊಂದಿಗೆ ಇದೇ ಮೊದಲ ಬಾರಿಗೆ 'ವೃಕ್ಷ ಕಿಡ್ಸ್ ರನ್' ಆಯೋಜಿಸಲಾಗಿತ್ತು. "ಮರಗಳಿಗಾಗಿ ಮಕ್ಕಳ ಓಟ, ಮುದ್ದು ಹೆಜ್ಜೆಗಳಲ್ಲಿ ಹಸಿರು ಭವಿಷ್ಯ" ಎಂಬ ಶೀರ್ಷಿಕೆಯಡಿ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪುಟಾಣಿಗಳು ಅತ್ಯಂತ ಸಂತಸದಿಂದ ಭಾಗವಹಿಸಿ, ಮುಖ್ಯ ವೃಕ್ಷೋತ್ಥಾನ್ ಹೆರಿಟೇಜ್ ರನ್ನ ಸಂಭ್ರಮಕ್ಕೆ ಮುನ್ನುಡಿ ಬರೆದರು.
ಬೆಳಗ್ಗೆ 6 ಗಂಟೆಗೆ ಚುಮುಚುಮು ಚಳಿಯ ನಡುವೆಯೂ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಮಕ್ಕಳು ಅಪಾರ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡಿದ್ದರು. ಪುಟಾಣಿಗಳ ಓಟವನ್ನು ನೋಡುವ ದೃಶ್ಯವೇ ಮನಸ್ಸಿಗೆ ಸಂತಸ ತರುವಂತಹದ್ದಾಗಿತ್ತು. ಮಕ್ಕಳ ಓಟ ಕಂಡು ಪಾಲಕರ ಮುಖದಲ್ಲಿಯೂ ಸಂತಸ ಮನೆ ಮಾಡಿತ್ತು. ಪಾಲಕರೊಂದಿಗೆ ಬಂದಿದ್ದ ಚಿಣ್ಣರು, ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಅತ್ಯಂತ ಸಂಭ್ರಮದಿಂದ ಭಾಗವಹಿಸಿ, ತಮ್ಮ ಪುಟ್ಟ ಪುಟ್ಟ ಹೆಜ್ಜೆಗಳ ಮೂಲಕ "ನಾವು ಪರಿಸರ ಸ್ನೇಹಿಗಳು" ಎಂಬ ಸಂದೇಶ ಸಾರಿದರು.
ಈ ಕಿಡ್ಸ್ ರನ್ ಅನ್ನು ಪ್ರತ್ಯೇಕ ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ, ವಾಕ್ ಮತ್ತು ಶ್ರವಣ ದೋಷವುಳ್ಳ ವಿಶೇಷ ಮಕ್ಕಳಿಗಾಗಿಯೂ ಪ್ರತ್ಯೇಕ ಓಟವನ್ನು ಏರ್ಪಡಿಸಲಾಗಿತ್ತು. ಈ ವಿಶೇಷ ಮಕ್ಕಳ ಓಟ ನೆರೆದಿದ್ದ ಎಲ್ಲರ ಕಣ್ಮನ ಸೆಳೆಯಿತು, ಇದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.
ಇಂದಿನ ಮಕ್ಕಳ ಓಟದಲ್ಲಿ ವಿಜೇತರಾದ ಪುಟಾಣಿಗಳಿಗೆ ಡಿಸೆಂಬರ್ 6, ಶನಿವಾರದಂದು ಬೆಳಿಗ್ಗೆ 8 ಗಂಟೆಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
PublicNext
05/12/2025 08:11 pm