ಬೈಂದೂರು : ಸಂವಿಧಾನ ಬದಲಾಯಿಸುದಕ್ಕಾಗಿಯೇ ನಾವು ಬಂದಿರುವುದಾಗಿ ಹೇಳುವವರು, ಸಂವಿಧಾನವನ್ನು ಪರಾಮರ್ಶೆಗೆ ಹೊರಟವರು, ಮೀಸಲಾತಿ ವಿರೋಧಿಗಳು ಜಿಲ್ಲೆಯಲ್ಲಿ ನಿಜ ಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶನಕ್ಕೆ ಪ್ರತಿರೋಧ ಒಡ್ಡುವುದು ನನ್ನ ಕರ್ತವ್ಯ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ತಿಳಿಸಿದ್ದಾರೆ.
ಈ ನಾಟಕ ಪ್ರದರ್ಶನದ ನನ್ನ ವಿರೋಧಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪಾದ ಸೇವೆ ಮಾಡುವ ಬಿಜೆಪಿಯ ಜಿಲ್ಲಾ ಎಸ್.ಸಿ.ಮೋಚಾದ ಸಹೋದರರ ಬಗ್ಗೆ ನನಗೆ ಕಣಿಕರವಿದೆ. ಕೊಡಗು ರಂಗಭೂಮಿ ಟ್ರಸ್ಟ್ನ ಸಂಯೋಜನೆಯಲ್ಲಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮೈಸೂರಿನಲ್ಲಿ ರಂಗಾಯಣದಲ್ಲಿ ಇದ್ದಾಗ ಹಲವು ವಿವಾದಾತ್ಮಕ ನಾಟಕಗಳನ್ನು ನಿರ್ದೇಶನ ಮಾಡಿ ಟೀಕೆಗೆ ಒಳಗಾದವರು. ಈ ವ್ಯಕ್ತಿಯ ನಿರ್ದೇಶನದ ಸಾವರ್ಕರ್ ನಾಟಕದಲ್ಲಿಯೂ ಅಂಬೇಡ್ಕರ್ ವಿಚಾರಗಳನ್ನು ತಂದು ವಿವಾದ ಸೃಷ್ಟಿಸಿ ದಲಿತ ದಮನಿತ ಸಮುದಾಯಕ್ಕೆ ಅವಮಾನಮಾಡಿರುತ್ತಾರೆ ಎಂಬ ಆತಂಕವಿದೆ. ಇದೀಗ ಅವಿತಿಟ್ಟಸತ್ಯಗಳ ಸ್ಪೋಟ ಎಂಬ ಸಂದೇಶದಡಿ “ನಿಜ ಮಹಾತ್ಮ ಬಾಬಾ ಸಾಹೇಬ " ಎಂಬ ನಾಟಕವನ್ನು ಉಡುಪಿ ಜಿಲ್ಲೆಯಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡುತ್ತಾರೋ ಬಿಡುತ್ತಾರೋ ಅದು ಬೇರೆ ವಿಚಾರ.ಎಲ್ಲಕಿಂತ ಹೆಚ್ಚಾಗಿ ಈ ನಾಟಕವನ್ನು ಪ್ರದರ್ಶನ ಮಾಡುವ ಸಂಘಟನೆಗಳು ಇದುವರೆಗೂ ಅಂಬೇಡ್ಕರ್ ಜಯಂತಿಯನ್ನಾಗಲಿ, ಸಂವಿಧಾನ ದಿನವನ್ನಾಗಲಿ ಅಥವಾ ಅಸ್ಪೃಶ್ಯತಾ ನಿವಾರಣೆಗೆ ಯಾವುದೇ ಕಾರ್ಯಕ್ರಮ ಆಯೋಜಿಸಿದವರಲ್ಲ. ಬದಲಾಗಿ ದಲಿತರ ಮೀಸಲಾತಿ ವಿರೋಧಿಗಳು, ಏಕಾಎಕಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಕಾಲ್ಪನಿಕ ಕಥೆ ಕಟ್ಟಿ, ಕಾಂಗ್ರೆಸ್ ವಿರುದ್ಧ ದಲಿತರನ್ನು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಅಂಬೇಡ್ಕರನ್ನು ಎತ್ತಿಕಟ್ಟುವ ಕಾಲ್ಪನಿಕ ನಾಟಕವನ್ನು ಪ್ರದರ್ಶಿಸುದಕ್ಕೆ ಆಕ್ಷೇಪಿಸುವುದಕ್ಕೆ ಅರ್ಥವಿದೆ. ಆ ಕಾಲದ ಕಾಂಗ್ರೆಸ್ ವಿರೋಧಿಗಳೇ ಈಗಿನ ಸಂಘ ಪರಿವಾರದವರು ಎಂಬುದಕ್ಕೆ ಹಿಂದೂ ಕೋಡ್ ಬಿಲ್ ಮಂಡನೆಯ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದವರ ಹೆಸರನ್ನು ನೆನಪಿಸಿದರೆ ಸಾಕು.
ಮುಖ್ಯವಾಗಿ ಸಮಾನತೆಯನ್ನು ಬೋಧಿಸಿದ ಬುದ್ಧನನ್ನು ಕಂಡರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಎಲ್ಲಿಲ್ಲದ ಸಿಟ್ಟು. 1956ರಲ್ಲಿ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮರಳಿದಾಗ 'ಹೇಡಿ ಧರ್ಮಕ್ಕೆ ಸೇರಿದ ಅಂಬೇಡ್ಕರ್ ' ಎಂದು ಸಾವರ್ಕರ್ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಅವಿತಿಟ್ಟ ಕಹಿ ಸತ್ಯ ಘಟನೆಗಳ ಸ್ಪೋಟ ಎಂಬ ನಿಜಮಹಾತ್ಮ ಬಾಬಾ ಸಾಹೇಬ ನಾಟಕದಿಂದ ಜಿಲ್ಲೆಯಲ್ಲಿ ಕೋಮು ಸೌರ್ಹಾದತೆಗೆ ಧಕ್ಕೆ ಬರದಿರಲಿ ಎಂದು ಆಕ್ಷೇಪ ವ್ಯಕ್ತಪಡಿಸುವುದ ಅನಿವಾರ್ಯ ಎಂದು ಜಯನ್ ಮಲ್ಪೆ ತಿಳಿಸಿದ್ದಾರೆ.
Kshetra Samachara
17/12/2025 09:26 pm