ಶಿರಸಿ: ಶಿರಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಜನವರಿ 23, ಶುಕ್ರವಾರದಂದು ಈ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಉತ್ತರ ಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಸಿಎಫ್ ಹೀರಾಲಾಲ್ ಅವರಿಂದ ಉದ್ಘಾಟನೆ ಮತ್ತು ಸಂದೇಶ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಸಿಎಫ್ ಹೀರಾಲಾಲ್, "ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳಿಗೆ ಇದು ದಿನನಿತ್ಯದ ಒತ್ತಡಗಳನ್ನು ದೂರ ಮಾಡುವ ಉತ್ತಮ ವೇದಿಕೆಯಾಗಿದ್ದು, ಇವತ್ತು ಸೋತವನು ನಾಳೆ ಗೆಲ್ಲುತ್ತಾನೆ, ಇವತ್ತು ಗೆದ್ದವನು ಮುಂದೆ ಸೋಲಲೂಬಹುದು ಎಂಬ ಕ್ರೀಡಾ ಸ್ಫೂರ್ತಿಯನ್ನು ಸಾರುತ್ತದೆ" ಎಂದು ಕರೆ ನೀಡಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ದೇಶದ, ರಾಜ್ಯದ ಮತ್ತು ಜಿಲ್ಲೆಯ ಬೆನ್ನೆಲುಬಾಗಿ ಪ್ರತಿಯೊಂದು ಹಂತದಲ್ಲಿ ಅಭಿವೃದ್ಧಿಯ ಪಥವನ್ನು ಹಾರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಈ ಕ್ರೀಡಾಕೂಟದ ಉಪಯೋಗವನ್ನು ನಮ್ಮ ಎಲ್ಲಾ ಗ್ರಾಮೀಣ ಅಭಿವೃದ್ಧಿ ಮತ್ತು ಜಿಲ್ಲಾ ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿಗಳು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಎಫ್ ಸಂದೀಪ್ ಹಿಂದೂರಾವ್ ಸೂರ್ವಂಶಿ, ಜಿಲ್ಲಾ ಪಂಚಾಯತ್ ಸಿಇಓ ದಿಲೀಷ್ ಶೆಶಿ, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರಿಂಗ್ ಶಿರಸಿ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಎಸ್ ಜಾಗೀರದಾರ, ಸಹಾಯಕ ಕ್ರೀಡಾ ನಿರ್ದೇಶಕ ರವಿ ನಾಯಕ, ನಗರ ಸಭೆ ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ತಾಪಂ ಇಓ ಚನ್ನಬಸಪ್ಪ ಹಾವಣಗಿ, ಕಿರಣ ಕುಮಾರ ನಾಯ್ಕ ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಮತ್ತು ಜಿಲ್ಲಾ ಪಂಚಾಯತ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
PublicNext
23/01/2026 08:04 pm