ಸಾಗರ : ಇತಿಹಾಸ ಪ್ರಸಿದ್ಧ ಮಾರಿಕಾಂಬಾ ಜಾತ್ರೆ ಸಿದ್ಧತೆ ಭರದಿಂದ ಸಾಗಿದೆ.ಮಾರಿಕಾಂಬಾ ಜಾತ್ರೆಗೆ ಅಗತ್ಯ ಸಿದ್ಧತೆ ನಡೆದಿದ್ದು, ಶಾಸಕರ ಮಾರ್ಗದರ್ಶನದಲ್ಲಿ ಜಾತ್ರಾ ಪೂರ್ವ ತಯಾರಿ ಬಹುತೇಕ ಮುಕ್ತಾಯಗೊಂಡಿದೆ ಎಂದು ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಗುರುವಾರ ಮಾರಿಕಾಂಬಾ ನ್ಯಾಸ ಪ್ರತಿಷ್ಠಾನದ ವತಿಯಿಂದ ಕುಸ್ತಿ ಅಖಾಡ ತಯಾರಿ ಹಾಗೂ ವಸ್ತುಪ್ರದರ್ಶನ ಮಳಿಗೆ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಮಾರಿಕಾಂಬಾ ಜಾತ್ರೆಯಲ್ಲಿ ಅತ್ಯಂತ ವಿಶೇಷವಾಗಿ ದೇಶದ ಗಮನ ಸೆಳೆಯುವುದು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ. ದೇಶದ ಬೇರೆಬೇರೆ ರಾಜ್ಯಗಳಿಂದ ಮಾರಿಕಾಂಬಾ ಜಾತ್ರೆಯ ಕುಸ್ತಿ ಪಂದ್ಯಾವಳಿಗೆ ಪೈಲ್ವಾನರು ಬರುತ್ತಾರೆ. ಒಲಿಂಪಿಕ್ಸ್, ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಪೈಲ್ವಾನರು ಸಾಗರದ ಬಯಲು ಕುಸ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಫೆ.6ರಿಂದ 8ರವರೆಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ಈಗಾಗಲೇ ದೇಶಾದ್ಯಂತ ಕುಸ್ತಿ ಪಟುಗಳು ಪಂದ್ಯದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದು, ಫೋನ್ ಮೂಲಕ ವಿಚಾರಿಸುತ್ತಿದ್ದಾರೆ. ಈ ಬಾರಿ ಅತ್ಯಂತ ವಿಶೇಷವಾಗಿ ಕುಸ್ತಿ ಪಂದ್ಯಾವಳಿಯನ್ನು ಕುಸ್ತಿ ಸಮಿತಿ ಆಯೋಜಿಸಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್,ಸಮಿತಿ ಉಪಾಧ್ಯಕ್ಷ ಸುಂದರ ಸಿಂಗ್,ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಕುಸ್ತಿ ಸಮಿತಿ ಸಂಚಾಲಕ ಅಶೋಕ್, ಸಹ ಸಂಚಾಲಕ ಶಶಿಕಾಂತ ಎಂ.ಎಸ್., ಪ್ರಮುಖರಾದ ರವಿನಾಯ್ಡು, ಸಂತೋಷ್ ಸದ್ಗುರು, ಪುರುಷೋತ್ತಮ, ಬಸವರಾಜ್, ನವೀನ್ ಕೆ.ಸಿ., ಇನ್ನಿತರರು ಹಾಜರಿದ್ದರು.
Kshetra Samachara
29/01/2026 03:28 pm
LOADING...