ಮೂಡಿಗೆರೆ: ಕೊಟ್ಟ ಮಾತು ತಪ್ಪದ ಸತ್ಯಹರಿಶ್ಚಂದ್ರನಂತೆ ವ್ಯಕ್ತಿಯೊಬ್ಬರು ತಮ್ಮ ಫಸಲು ನೀಡುವ ಕಾಫಿ ತೋಟವನ್ನೇ ಕಡಿದು ಹಳ್ಳಿಗೆ ರಸ್ತೆ ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಸಮೀಪದ ತುದಿಯಳ ಎಂಬ ಗ್ರಾಮಕ್ಕೆ ಕಳೆದ ಹಲವು ದಶಕಗಳಿಂದ ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಇಲ್ಲಿನ 15 ಕುಟುಂಬಗಳ ಸಂಕಷ್ಟಕ್ಕೆ ಪ್ರತಿ ಚುನಾವಣೆಯಲ್ಲೂ ರಾಜಕಾರಣಿಗಳು ಭರವಸೆ ನೀಡಿ ಬಳಿಕ ಕೈಕೊಡುತ್ತಿದ್ದರು. ಆದರೆ, 2020ರ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ತೋಟದ ಮಾಲೀಕ ಸತ್ಯ ಅವರು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಪುಟ್ಟರಾಜು ಅವರನ್ನು ಗೆಲ್ಲಿಸಿದರೆ, ತಮ್ಮ ತೋಟದ ಮಧ್ಯೆಯೇ ರಸ್ತೆ ನಿರ್ಮಿಸಿಕೊಡುವುದಾಗಿ ಗ್ರಾಮಸ್ಥರಿಗೆ ಮಾತು ನೀಡಿದ್ದರು.
ಚುನಾವಣೆಯಲ್ಲಿ ಪುಟ್ಟರಾಜು ಗೆಲುವು ಸಾಧಿಸಿ, ಎರಡು ತಿಂಗಳ ಹಿಂದೆ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸತ್ಯ ಅವರು ತಮ್ಮ ಮಾತಿನಂತೆ 30 ವರ್ಷಗಳ ಕಾಲ ಫಸಲು ನೀಡುತ್ತಿದ್ದ ಕಾಫಿ ಗಿಡಗಳನ್ನು ಕಡಿದು ಹಾಕಿದ್ದಾರೆ. ಸುಮಾರು 750 ಮೀಟರ್ ಉದ್ದ ಹಾಗೂ 14 ಅಡಿ ಅಗಲದ ಜಾಗವನ್ನು ರಸ್ತೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದಾರೆ.
ಗ್ರಾಮಸ್ಥರೆಲ್ಲರೂ ಸೇರಿ ಸತ್ಯ ಅವರ ಈ ತ್ಯಾಗದ ಫಲವಾಗಿ ನಿರ್ಮಾಣವಾದ ರಸ್ತೆಯನ್ನು ಅಧ್ಯಕ್ಷ ಪುಟ್ಟರಾಜು ಅವರ ಕೈಯಿಂದಲೇ ಉದ್ಘಾಟನೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪುಟ್ಟರಾಜು ಅವರು, ಮುಂದಿನ ದಿನಗಳಲ್ಲಿ ಈ ಮಾರ್ಗಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸ್ವಂತ ಲಾಭಕ್ಕಿಂತ ಊರಿನ ಹಿತವೇ ಮುಖ್ಯವೆಂದು ತೋರಿಸಿಕೊಟ್ಟ ಸತ್ಯ ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
Kshetra Samachara
30/01/2026 10:45 am
LOADING...