ದಕ್ಷಿಣಕನ್ನಡ: ಬದುಕುವುದಕ್ಕೆ ನೂರಾರು ದಾರಿ ಇದೆ. ಆದರೆ ಬಹುತೇಕ ಮಂದಿ ತಮ್ಮ ಆಯ್ಕೆಯಲ್ಲಿಯೇ ಸೋಲುತ್ತಾರೆ. ಎಷ್ಟೋ ಮಂದಿ ಅವಕಾಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಮುಂದಾಗುವುದಿಲ್ಲ. ತರಕಾರಿ ಬೆಳೆಸಿಯೂ ಸಾಧನೆ ಮಾಡಿದವರಿದ್ದಾರೆ. ವಿಶೇಷವಾಗಿ ಮಹಿಳೆಯರು ಮನೆಯಲ್ಲಿ ಕುಳಿತುಕೊಂಡು ಹಪ್ಪಳ ಉಪ್ಪಿನಕಾಯಿ ತಯಾರಿಸಿ ಅದನ್ನು ಮಾರಾಟ ಮಾಡಿ ಕುಟುಂಬವನ್ನು ಸಾಕುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟು ಅಲ್ಲಿಯೂ ಯಶಸ್ಸು ಸಾಧಿಸಿದ್ದಾರೆ. ಇಂತವರ ಸಾಲಿಗೆ ಪುತ್ತೂರಿನ ಮಹಿಳೆಯೊಬ್ಬರು ಸೇರುತ್ತಾರೆ. ನರ್ಸರಿಯನ್ನು ಉದ್ಯಮವಾಗಿ ಬೆಳೆಸಿಕೊಂಡು ಸಾಕಷ್ಟು ಆರ್ಥಿಕ ಭದ್ರತೆಯನ್ನು ಗಟ್ಟಿಯಾಗಿಸಿಕೊಂಡ ಭವ್ಯಾ ವಿ ಶೆಟ್ಟಿ ಇತರ ಮಹಿಳೆಯರಿಗೆ ಮಾದರಿಯಾಗಿ ಬೆಳೆದು ನಿಂತಿದ್ದಾರೆ.
ಪುತ್ತೂರಿನ ಕೋಡಿಂಬಾಡಿ ಗ್ರಾಮದ ಬೆಳ್ಳಿಪ್ಪಾಡಿಯ ವಿದ್ಯಾಪ್ರಸಾದ್ ಅವರ ಪತ್ನಿ ಭವ್ಯಾ ವಿ ಶೆಟ್ಟಿ ಅವರು ಇದೀಗ ನರ್ಸರಿ ಉದ್ಯಮಿ. ವಾರ್ಷಿಕವಾಗಿ ಸುಮಾರು 20 ಲಕ್ಷದ ವಹಿವಾಟು ನಡೆಸುವ ಮೂಲಕ ಹಲವಾರು ಮಂದಿಗೆ ಕೆಲಸ ಕೊಟ್ಟು ಅವರಿಗೂ ಆರ್ಥಿಕ ಸಬಲತೆ ಸೃಷ್ಟಿಸಿದ್ದಾರೆ. ಇವರ ನರ್ಸರಿ ಕನಸಿಗೆ ನೀರೆದದ್ದು ಕೋಡಿಂಬಾಡಿಯ ಬೆಳ್ಳಿಪ್ಪಾಡಿ ವಿದ್ಯಾಶ್ರೀ ಸ್ವಸಹಾಯ ಸಂಘ. ಇಲ್ಲಿಯೇ ಅವರ ಸ್ವ ಉದ್ಯೋಗದ ಕನಸು ಆರಂಭ. ಇಲ್ಲಿ 50 ಸಾವಿರ ರೂಪಾಯಿ ಸಾಲದೊಂದಿಗೆ ನರ್ಸರಿಗೆ ಮೊದಲ ಹೆಜ್ಜೆ ಇಡುತ್ತಾರೆ. ಬಳಿಕ ಕೋಡಿಂಬಾಡಿ ಮಾಲಿಂಗೇಶ್ವರ ಸಂಜೀವಿನಿ ಒಕ್ಕೂಟದಿಂದ 1.50 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ನರ್ಸರಿಗೆ ಮತ್ತಷ್ಟು ಹೊಸತನ ನೀಡುತ್ತಾರೆ. ಮೊದಲಿಗೆ ಕೋಡಿಂಬಾಡಿ ಹಾಲು ಉತ್ಪಾದಕ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಇವರು ಅದನ್ನು ಬಿಟ್ಟು ತನ್ನ ನರ್ಸರಿ ನಿರ್ಮಿಸುವ ಕನಸಿಗೆ ಹೆಜ್ಜೆ ಹಾಕುತ್ತಾರೆ.
ಪತಿ ವಿದ್ಯಾಪ್ರಸಾದ್ ಕೆಲ ಕಾಲ ನರ್ಸರಿಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಅದನ್ನು ನಾವೇ ಮಾಡಿದರೆ ಹೇಗೆ ಎಂಬ ಚಿಂತನೆಯೇ ಈ ಕನಸಿಗೆ ಪೂರಕವಾಯಿತು. ಇದರಿಂದ ಬದುಕು ಕಟ್ಟಿಕೊಳ್ಳಬಹುದು ಎಂಬುವುದು ಖಾತ್ರಿಯಾಗುತ್ತಿರುವಂತೆ ಸ್ವಸಹಾಯ ಸಂಘದ ಮಹಿಳೆಯರಿಗೆ ಅಡಮಾನರಹಿತ ಸಾಲ ಯೋಜನೆಯಲ್ಲಿ ವಿದ್ಯಾಶ್ರೀ ಸ್ವಸಹಾಯಸಂಘಕ್ಕೆ 20 ಲಕ್ಷ ರೂಪಾಯಿ ಸಾಲದ ಅವಕಾಶ ದೊರೆತಾಗ ಅದರಲ್ಲಿ 12 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ನರ್ಸರಿಯ ಚೌಕಟ್ಟನ್ನು ದೊಡ್ಡಮಟ್ಟಕ್ಕೆ ವಿಸ್ತಾರ ಮಾಡುವ ಯೋಚನೆ ಮಾಡುತ್ತಾರೆ. ಆದರೆ ಇವರ ಬಳಿಯಲ್ಲಿ ಅಷ್ಟೊಂದು ಜಾಗವಿಲ್ಲ. ಇದಕ್ಕಾಗಿ ಕೆದಿಲ ಗ್ರಾಮದ ಕಜೆ ಎಂಬಲ್ಲಿನ ಜಾಗವೊಂದನ್ನು ಲೀಸ್ ಮೇಲೆ ಪಡೆದುಕೊಂಡು ಈ ದಂಪತಿಗಳಿಬ್ಬರೂ ದೊಡ್ಡ ನರ್ಸರಿಯ ಕನಸನ್ನು ನನಸು ಮಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಈ ನರ್ಸರಿ ಸಾಕಷ್ಟು ಬೆಳೆದಿದೆ.
PublicNext
30/01/2026 05:19 pm