ಗುಂಡ್ಲುಪೇಟೆ : ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಯಕೊ ಸೆನ್ಸಿಟೀವ್ ಜೋನ್ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಕುಂದಕೆರೆ ವಲಯ ಆರ್ ಎಫ್ ಒ ಅವರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮಂಗಲ ಎಲ್ಲೆ ಸರ್ವೇ ನಂಬರ್ 24 ರಲ್ಲಿ ಅರಣ್ಯ ಇಲಾಖೆ ನಿಬಂಧನೆಗಳನ್ನು ಗಾಳಿಗೆ ತೂರಿರುವ ಗೋ.ಮಧುಸೂದನ್ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲದೆ, ಸುತ್ತಲೂ ಸಿಮೆಂಟ್ ಗೋಡೆ ನಿರ್ಮಾಣ ಮಾಡುವ ಮೂಲಕ ರಕ್ಷಣಾ ಕಾಯ್ದೆಯನ್ನೇ ಉಲ್ಲಂಘಿಸಿದ್ದಾರೆ. ಬಿಜೆಪಿ ನಾಯಕ ಗೋ.ಮಧುಸೂದನ್ ಅವರ ತಂದೆ ಗೋಪಾಲ ಕೃಷ್ಣಚಾರ್ ಅವ್ರಿಗೆ ಸೇರಿದ ಜಮೀನಿನಲ್ಲಿ ಪರಿಸರ ಸೂಕ್ಷ್ಮ ವಲಯ ಮಾನಿಟರಿಂಗ್ ಕಮಿಟಿಯ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇವಲ ಪಂಪ್ ಹೌಸ್ ಮನೆ ನಿರ್ಮಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿ ಅನುಮತಿ ಸಿಗುವ ಮೊದಲೇ ಕಾಮಗಾರಿ ಆರಂಭಿಸಿ ಹೆಚ್ಚುವರಿಯಾಗಿ ಸುತ್ತುಗೋಡೆ ನಿರ್ಮಿಸಿದ್ದಾರೆ. ಈ ಕುರಿತಾಗಿ ಕಳೆದ ವರ್ಷ ಆಕ್ಟೊಬರ್ ನಲ್ಲಿಯೇ ಟಾಸ್ಕ್ ಪೋರ್ಸ್ ಕಮಿಟಿಗೆ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಸ್ಥಳವು ಮೋಯಾರ್ ಕಣಿಯನಪುರ ಆನೆ ಕಾರಿಡಾರ್ ಪ್ರದೇಶ ಎಂದು ಗುರುತಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಜಮೀನಿನಲ್ಲಿ ಯಾವುದೇ ವಾಣಿಜ್ಯ ಉದ್ದೇಶಿತ ಚಟುವಟಿಕೆ ನಡೆಸುವುದು, ಅನಧಿಕೃತ ಕಟ್ಟಡ ನಿರ್ಮಾಣ ಮಾಡಿ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದು ನಿಷಿದ್ಧವಾಗಿದೆ ಎಂಬುದು ಅರಣ್ಯ ಇಲಾಖೆ ವಾದವಾಗಿದೆ. ಸದ್ಯ ಅರಣ್ಯದೊಳಗೆ ಕಟ್ಟಡ ನಿರ್ಮಾಣ ಮಾಡುವ ಮೂಲಕ ಕಾಂಪೌಂಡ್ ನಿರ್ಮಿಸಿ ವನ್ಯಜೀವಿಗಳ ಚಲನ ವಲನಕ್ಕೆ ಅಡ್ಡಿಪಡಿಸಿರುವ ಹಾಗೂ ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ನಿಬಂಧನೆಗಳನ್ನು ಉಲಂಘಿಸಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ವರದಿಗಾರರ ಜೊತೆ ಮಾತನಾಡಿದ ಗುಂಡ್ಲುಪೇಟೆ ತಹಶೀಲ್ದಾರ್ ಎಂ.ಎಸ್.ತನ್ಮಯ್, ಅನಧಿಕೃತ ರೆಸಾರ್ಟ್ಸ್ ಮತ್ತು ಹೋಮ್ ಸ್ಟೇಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ನಿಯಮ ಬಾಹಿರವಾಗಿ ತಲೆಯೆತ್ತಿರುವ ವಾಣಿಜ್ಯೋದ್ಯಮ ಕಟ್ಟಡಗಳ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
Kshetra Samachara
01/02/2026 12:00 pm