ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಕೇರಳ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಕೋರರ ಹಾವಳಿ ಮಿತಿ ಮೀರಿದೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಅಲರ್ಟ್ ಆಗಿದ್ದು, ತಪಾಸಣೆ ಬಿಗಿಗೊಳಿಸಿದ್ದಾರೆ.
ಕೇರಳ ಹೆದ್ದಾರಿಯ ಕನ್ನೇಗಾಲ ಟೋಲ್ ಬಳಿ ಗುಂಡ್ಲುಪೇಟೆ ಠಾಣೆ ವತಿಯಿಂದ ಹೆಚ್ಚುವರಿ ಚೆಕ್ ಪೋಸ್ಟ್ ತೆರೆದು ಪೊಲೀಸರನ್ನು ನೇಮಕ ಮಾಡಿ ಗುಂಡ್ಲುಪೇಟೆಗೆ ಆಗಮಿಸುವ ಮತ್ತು ತೆರಳುವ ಪ್ರತಿಯೊಂದು ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ತಪಾಸಣೆ ಮಾಡಲಾಗುತ್ತಿದೆ.
ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡುವ ದರೋಡೆಕೋರರು: ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುವ ಚಿನ್ನದ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ಒಂದು ಕಾಲು ಕೆಜಿ ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಈಗಾಗಲೇ ಪೊಲೀಸರು 3 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮಧ್ಯೆ ಪ್ರಕರಣದ ಕಿಂಗ್ ಪಿನ್ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಚಿನ್ನದ ಉದ್ಯಮಿಯ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಚಿನ್ನದ ಉದ್ಯಮಿಗಳಾದ ಫೈಸಲ್ ಮತ್ತು ಜಮ್ಸಿದ್ ಇಬ್ಬರು ಕೇರಳದಿಂದ ಬಂದು ತಮ್ಮ ಚಿನ್ನವನ್ನು ಮಾರಾಟ ಮಾಡಿ 10 ಲಕ್ಷ ನಗದನ್ನು ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಡ್ಲುಪೇಟೆ ಕೇರಳ ಗಡಿ ಮಧ್ಯೆ ಬರುವ ಕಾಡಿನಲ್ಲಿ ನೆಟ್ವರ್ಕ್ ಕಂಪ್ಲೀಟ್ ಬಂದ್ ಆಗುತ್ತದೆ. ಯಾವ ಮೊಬೈಲ್ ಸಿಮ್ ಕೂಡ ವರ್ಕ್ ಆಗಲ್ಲ. ಸಂಪರ್ಕ ಕಡಿತವಾಗುವ ಸ್ಥಳದಲ್ಲಿ ಚಿನ್ನದ ಉದ್ಯಮಿಗಳನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ ನಾಲ್ಕೈದು ಜನರ ತಂಡ ಮಾರಕಾಸ್ತ್ರ ತೋರಿಸಿ, ಬೆದರಿಸಿ 10 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿದೆ.
ದರೋಡೆ ಘಟನೆ ಜ. 10 ರಂದು ನಡೆದಿದ್ದರೂ ಕೂಡ ದೂರುದಾರರು ಜ. 27 ಕ್ಕೆ ಬಂದು ಗುಂಡ್ಲುಪೇಟೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಈಗ ಟೋಲ್ ಗೇಟ್ ಬಳಿ ಮತ್ತೊಂದು ಚೆಕ್ಪೋಸ್ಟ್ ನಿರ್ಮಾಣ ಮಾಡಿದ್ದು, ಕೇರಳದಿಂದ ಕರ್ನಾಟಕ, ಕರ್ನಾಟಕದಿಂದ ಕೇರಳಕ್ಕೆ ತೆರಳುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಈ ಕುರಿತು ಚಾಮರಾಜನಗರ ಎಸ್ಪಿ ಮುತ್ತುರಾಜ್ ಪ್ರತಿಕ್ರಿಯಿಸಿ, ಕೇರಳದಿಂದ ಬರುವ ದರೋಡೆಕೋರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈಗಾಗಲೇ ಚೆಕ್ ಪೋಸ್ಟ್ ತೆರೆದು ಪ್ರತಿ ವಾಹನ ತಪಾಸಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
PublicNext
03/02/2026 05:41 pm