ಮೊಳಕಾಲ್ಮುರು: ಪಟ್ಟಣ ಸೇರಿ ತಾಲ್ಲೂಕಿನ 33 ಗ್ರಾಮಗಳ ಆರಾಧ್ಯದೈವ, ಬುಡಕಟ್ಟು ಸಂಸ್ಕೃತಿಗಳ ಒಡೆಯ ನುಂಕಿಮಲೆ ಸಿದ್ದೇಶ್ವರನ ತ್ರೈವಾರ್ಷಿಕ ಜಾತ್ರೆಗೆ ಪಟ್ಟಣವು ನವ ವಧುವಿನಂತೆ ಸಿದ್ಧವಾಗಿದೆ.
ಪ್ರತಿ 3 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಮುಖಂಡರು ದೇವರನ್ನು ಹೂವಿನ ಅಪ್ಪಣೆ ಕೇಳುವ ಮೂಲಕ ದಿನ ನಿಗದಿಪಡಿಸುತ್ತಾರೆ. ಇದರಂತೆ ಡಿ. 8ರಂದು ಬೆಟ್ಟದಲ್ಲಿರುವ ನುಂಕಿಮಲೆ ಸಿದ್ದೇಶ್ವರ ದೇವಸ್ಥಾನಕ್ಕೆ ಹೋಗಿ ಸ್ವಾಮಿ ಅನುಮತಿ ಪಡೆದು ಜಾತ್ರೆ ನಿಗದಿ ಮಾಡಲಾಗಿತ್ತು. ದಕ್ಷಿಣ ಕಾಶಿ ಎಂದು ಹೆಸರಾಗಿರುವ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಐತಿಹ್ಯವಿದೆ.
ಭಾನುವಾರ ಬೆಳಿಗ್ಗೆ ಬೆಟ್ಟಕ್ಕೆ ತೆರಳಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣಕ್ಕೆ ಕರೆ ತರಲಾಯಿತು. ನಂತರ ಹಾನಗಲ್ ರಸ್ತೆಯ ನುಂಕಿಮಲೆ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆಯು ಮುಖ್ಯ ಬೀದಿಗಳಲ್ಲಿ ನಡೆಸಿ ಬಳಿಕ ಕೋಟೆ ಬಡಾವಣೆಯಲ್ಲಿರುವ ಸ್ವಾಮಿ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಲಾಗುವುದು.ಜೊತೆಗೆ ಅನ್ನಸಂತರ್ಪಣೆಯೂ ನಡೆಯಲಿದೆ.
ಸೋಮವಾರ ಬೆಳಿಗ್ಗೆ ಸಮೀಪದ ಬೆಟ್ಟದಲ್ಲಿರುವ ಕಂಪಳರಂಗ ಹೊಂಡಕ್ಕೆ ಸ್ವಾಮಿಯನ್ನು ಗಂಗಾಪೂಜೆಗೆ ಕರೆದುಕೊಂಡು ಹೋಗಲಾಗುವುದು. ಮಧ್ಯಾಹ್ನದ ವೇಳೆಗೆ ಸ್ವಾಮಿ ವಾಪಸ್ ಬರಲಿದ್ದು, ಸ್ವಾಗತ ಕೋರಿ ಕಟ್ಟೆ ಮೇಲೆ ಪ್ರತಿಷ್ಠಾಪನೆ ಮಾಡಿದ ನಂತರ ಪಟ್ಟಣ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಬಂದು ದರ್ಶನ ಪಡೆಯಲಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಧಾರ್ಮಿಕ ಕಾರ್ಯಕ್ರಮಗಳು, ಬೀದಿನಾಟಕ ಪ್ರದರ್ಶನ, ಯಕ್ಷಗಾನ ಪ್ರದರ್ಶನ, ಸಾಮಾಜಿಕ, ಪೌರಾಣಿಕ ನಾಟಕಗಳ ಪ್ರದರ್ಶನ, ಕೋಲಾಟ ಹಮ್ಮಿಕೊಳ್ಳಲಾಗಿದೆ.
Kshetra Samachara
01/02/2026 05:32 pm
LOADING...