ನವದೆಹಲಿ : ಮಗನನ್ನು ಕಳೆದುಕೊಂಡ ದುಃಖದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ವೇದಾಂತ ಸಮೂಹದ ಮುಖ್ಯಸ್ಥ ಅನಿಲ್ ಅಗರ್ವಾಲ್, ತಮ್ಮ ಆಸ್ತಿಯ ಶೇಕಡಾ 7ರಷ್ಟನ್ನು, ಅಂದರೆ 15,000 ಕೋಟಿ ರೂಪಾಯಿಗಳನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.
ಪುತ್ರ ಅಗ್ನಿವೇಶ್ ಅಗರ್ವಾಲ್ (49) ನಿಧನದ ಕೇವಲ ಒಂದು ತಿಂಗಳಲ್ಲೇ ಈ ಮಹತ್ವದ ನಿರ್ಧಾರವನ್ನು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ.
ದುಃಖದ ನಡುವೆಯೂ ಮಹತ್ವದ ನಿರ್ಧಾರ
ಜನವರಿ 7ರಂದು ಅನಿಲ್ ಅಗರ್ವಾಲ್ ಅವರ ಏಕೈಕ ಪುತ್ರ ಅಗ್ನಿವೇಶ್ ಅಗರ್ವಾಲ್ ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದರು. ಈ ಆಘಾತಕಾರಿ ಘಟನೆಯ ಬಳಿಕ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಈ ದುಃಖದ ನಡುವೆಯೂ, ಅಗರ್ವಾಲ್ ಕೇವಲ ಒಂದು ತಿಂಗಳಲ್ಲೇ ತಮ್ಮ ಆಸ್ತಿ ದಾನ ಪ್ರಕ್ರಿಯೆಯನ್ನು ಆರಂಭಿಸಿದ್ದು, ಈ ಕುರಿತು ಪ್ರಧಾನಿ ಮೋದಿ ಅವರಿಗೂ ಮಾಹಿತಿ ನೀಡಿದ್ದಾರೆ.
ಮೋದಿ ಜೊತೆ ಮಾತುಕತೆ, ದಾನದ ಘೋಷಣೆ
ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ವಿಶ್ವ ನಾಯಕರ ದುಂಡು ಮೇಜಿನ ಸಭೆಯಲ್ಲಿ ಅನಿಲ್ ಅಗರ್ವಾಲ್ ಪಾಲ್ಗೊಂಡಿದ್ದರು. ಜಾಗತಿಕ ಇಂಧನ ಭವಿಷ್ಯದ ಕುರಿತು ವಿಶ್ವ ನಾಯಕರೊಂದಿಗೆ ಚರ್ಚಿಸಿದ ಅಗರ್ವಾಲ್, ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ತಮ್ಮ ಪುತ್ರನ ಆಶಯದಂತೆ, ತಮ್ಮ ದುಡಿದ ಹಣದಲ್ಲಿ 15,000 ಕೋಟಿ ರೂಪಾಯಿಗಳನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಸೇರಿದಂತೆ ಸಮಾಜಕ್ಕೆ ಒಳಿತಾಗುವ ಯೋಜನೆಗಳಿಗೆ ದಾನ ಮಾಡುವುದಾಗಿ ಮೋದಿ ಅವರಿಗೆ ತಿಳಿಸಿದರು.
ಪ್ರಧಾನಿ ಮೋದಿಯವರ ಸಾಂತ್ವನ ಮತ್ತು ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ ಅನಿಲ್ ಅಗರ್ವಾಲ್, "ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆದ ನಾವೆಲ್ಲರೂ ಅದೃಷ್ಟವಂತರು. ಅವರು ದೇಶದ ಜನರ ಮಾತುಗಳನ್ನು, ನಾಡಿ ಮಿಡಿತವನ್ನು ಆಲಿಸುತ್ತಾರೆ. ಮೋದಿ ಒಬ್ಬ ಸಹಾನುಭೂತಿಯುಳ್ಳ, ಜನರೊಂದಿಗೆ ಬಲವಾದ ಸಂಪರ್ಕ ಹೊಂದಿರುವ ನಾಯಕ" ಎಂದು ಬಣ್ಣಿಸಿದರು.
PublicNext
03/02/2026 05:48 pm