ಬೆಂಗಳೂರು: ರಾಜಧಾನಿ ಬೆಂಗಳೂರು ಕುಖ್ಯಾತ ರೌಡಿಗಳಿಗೆ ಸುರಕ್ಷಿತ ತಾಣವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಕಳೆದ ಐದು ವರ್ಷಗಳಿಂದ ಬಿಹಾರ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಗಳಾದ ಮಾಣಿಕ್ ಸಿಂಗ್ ಮತ್ತು ಆತನ ತಂದೆ ಮನೋಜ್ ಸಿಂಗ್ ಅಂತಿಮವಾಗಿ ಬಿಹಾರದ ವಿಶೇಷ ಕಾರ್ಯಪಡೆ (STF) ಬಲೆಗೆ ಬಿದ್ದಿದ್ದಾರೆ.
ಬಿಹಾರದ ಈ ಅಪ್ಪ-ಮಗ ಇಬ್ಬರೂ ರೌಡಿಗಳು 24ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಇವರ ವಿರುದ್ಧ ದೂರುಗಳು ದಾಖಲಾಗಿದ್ದವು. ಇವರ ಬಂಧನಕ್ಕಾಗಿ ಬಿಹಾರ ಪೊಲೀಸ್ ಇಲಾಖೆ ಪ್ರತ್ಯೇಕ ತಂಡಗಳಿಗೆ 3 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು.
ಕಳೆದ ಐದು ವರ್ಷಗಳಿಂದ ಬಿಹಾರದಿಂದ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ ರೌಡಿ ಮಾಣಿಕ್ ಸಿಂಗ್, ಕಳೆದ ಎರಡು ವರ್ಷಗಳಿಂದ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ತಂದೆ ಮನೋಜ್ ಸಿಂಗ್ ಜೊತೆ ವಾಸವಿದ್ದ. ಬೆಂಗಳೂರಿನಲ್ಲಿ ಬಿಲ್ಡರ್ಗಳು ಮತ್ತು ಉದ್ಯಮಿಗಳಿಗೆ ಹಣ ನೀಡುವಂತೆ ಬೆದರಿಕೆ ಕರೆಗಳನ್ನು ಮಾಡಿ ಸುಲಿಗೆ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ ಐದು ವರ್ಷಗಳಿಂದ ಮಾಣಿಕ್ ಸಿಂಗ್ ಮತ್ತು ಮನೋಜ್ ಸಿಂಗ್ ಅವರ ಹಿಂದೆ ಬಿದ್ದಿದ್ದ ಬಿಹಾರದ ವಿಶೇಷ ಕಾರ್ಯಪಡೆ (STF) ಅಂತಿಮವಾಗಿ ಅವರನ್ನು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಇಬ್ಬರು ರೌಡಿಗಳನ್ನು ಬಿಹಾರದ STF ತಂಡ ಹೆಚ್ಚಿನ ವಿಚಾರಣೆಗಾಗಿ ತಮ್ಮ ರಾಜ್ಯಕ್ಕೆ ಕರೆದೊಯ್ದಿದೆ.
PublicNext
04/02/2026 02:04 pm
LOADING...