ಮೈಸೂರು : ಮನೆಯ ಶೋಕೇಸ್ನ ಇಕ್ಕಟ್ಟಾದ ಜಾಗದಲ್ಲಿ ಸಿಲುಕಿ ಎರಡು ದಿನಗಳಿಂದ ಒದ್ದಾಡುತ್ತಿದ್ದ ಮೂರು ಬೆಕ್ಕಿನ ಮರಿಗಳನ್ನು ಹೆಚ್.ಡಿ. ಕೋಟೆ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಟೈಗರ್ ಬ್ಲಾಕ್ ನಿವಾಸಿ ಸುನಿಲ್ ಎಂಬುವವರ ಮನೆಯ ಶೋಕೇಸ್ನ ಅತ್ಯಂತ ಕಿರಿದಾದ ಜಾಗದಲ್ಲಿ ಮೂರು ಬೆಕ್ಕಿನ ಮರಿಗಳು ಕಳೆದ ಎರಡು ದಿನಗಳಿಂದ ಸಿಲುಕಿಕೊಂಡಿದ್ದವು. ಎಷ್ಟೇ ಪ್ರಯತ್ನಿಸಿದರೂ ಅವುಗಳನ್ನು ಹೊರತೆಗೆಯಲು ಸಾಧ್ಯವಾಗದಿದ್ದಾಗ, ಮಾಲೀಕ ಸುನಿಲ್ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಸಹಾಯ ಕೋರಿದ್ದರು.ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ, ಪರಿಸ್ಥಿತಿಯನ್ನು ಅವಲೋಕಿಸಿದರು. ಬೆಕ್ಕಿನ ಮರಿಗಳಿಗೆ ಯಾವುದೇ ತೊಂದರೆಯಾಗದಂತೆ ಹೊರತೆಗೆಯಲು ಕಾರ್ಪೆಂಟರ್ ಮಹೇಶ್ ಅವರ ತಾಂತ್ರಿಕ ಸಹಾಯವನ್ನು ಪಡೆಯಲಾಯಿತು.
ಅತ್ಯಂತ ಜಾಗರೂಕತೆಯಿಂದ ಶೋಕೇಸ್ ಬಿಡಿಸಿ, ಎರಡು ದಿನಗಳಿಂದ ಆಹಾರ-ನೀರಲ್ಲದೆ ಒದ್ದಾಡುತ್ತಿದ್ದ ಮೂರು ಬೆಕ್ಕಿನ ಮರಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಮನೆಯ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
PublicNext
11/03/2026 08:15 am
LOADING...