ಗದಗ-ಬೆಟಗೇರಿ ನಗರದಲ್ಲಿ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ವಂಚಿಸುತ್ತಿರುವ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿರುವ ಇಂತಹ ಏಜೆನ್ಸಿಗಳ ಪರವಾನಗಿಯನ್ನು ರದ್ದುಗೊಳಿಸಬೇಕೆಂದೂ ಈ ಸಂದರ್ಭದಲ್ಲಿ ಒತ್ತಾಯಿಸಲಾಗಿದೆ.
ಎಲ್.ಪಿ.ಜಿ. ಸಿಲಿಂಡರ್ ಕೊರತೆ ಮತ್ತು ಕಾಳಸಂತೆ
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ಗೃಹ ಬಳಕೆಯ ಎಲ್.ಪಿ.ಜಿ. ಸಿಲಿಂಡರ್ಗಳ ಕೊರತೆಯಿಂದ ರಾಜ್ಯಾದ್ಯಂತ ಜನರು ಗ್ಯಾಸ್ ಖರೀದಿಗೆ ಮುಗಿಬಿದ್ದಿದ್ದಾರೆ.
ಸಿಲಿಂಡರ್ಗಳ ಕೊರತೆ ನೀಗಿಸಲು ಹೆಚ್ಚಿನ ಉತ್ಪಾದನೆಗೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ದೇಶದ ಹಲವೆಡೆ ಬ್ಲಾಕ್ ಮಾರ್ಕೆಟ್ನಲ್ಲಿ ಗೃಹ ಬಳಕೆಯ ಸಿಲಿಂಡರ್ ಒಂದೂವರೆ ಸಾವಿರ ರೂಪಾಯಿಗೆ ಮಾರಾಟವಾಗುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ವರದಿಗಳಾಗಿವೆ.
ಮುಂಬರುವ ದಿನಗಳಲ್ಲಿ ಹಲವು ಹಬ್ಬಗಳಿರುವುದರಿಂದ ಎಲ್.ಪಿ.ಜಿ. ಸಿಲಿಂಡರ್ಗೆ ಭಾರಿ ಬೇಡಿಕೆ ಇದೆ. ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ಜನರು ಆತಂಕದಿಂದ ಸಿಲಿಂಡರ್ ಖರೀದಿಗೆ ಮುಗಿಬೀಳುತ್ತಿರುವುದು ದೇಶದಾದ್ಯಂತ ಕಂಡುಬರುತ್ತಿದೆ.
ಅನೇಕ ಕಡೆಗಳಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ಇಟ್ಟುಕೊಂಡು ಜನರು ಹೊಸ ಸಿಲಿಂಡರ್ಗಾಗಿ ಕಾಯುತ್ತಿದ್ದಾರೆ.
ವಸ್ತ್ರದ್ ಗ್ಯಾಸ್ ಏಜೆನ್ಸಿ ವಿರುದ್ಧ ಆರೋಪ ಮತ್ತು ಪರವಾನಗಿ ರದ್ದತಿಗೆ ಆಗ್ರಹ
ಇಂತಹ ಸಂದರ್ಭದಲ್ಲಿ, ಗದಗ ನಗರದ ಬೆಟಗೇರಿ ಭಾಗದ ವಸ್ತ್ರದ್ ಭಾರತ ಗ್ಯಾಸ್ ಏಜೆನ್ಸಿ ಗ್ರಾಹಕರ ಹೆಸರಿಗೆ ಬಂದಿರುವ ಸಿಲಿಂಡರ್ಗಳನ್ನು ಅನಧಿಕೃತವಾಗಿ ಗ್ಯಾಸ್ ತುಂಬುವ ಅಂಗಡಿಗಳಿಗೆ ಹೆಚ್ಚಿನ ಹಣಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಮಧ್ಯಮ ವರ್ಗ ಹಾಗೂ ಬಡವರಿಗೆ ವಂಚಿಸುತ್ತಿದೆ ಎಂದು ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, ಮನೆ ಮನೆಗೆ ಗ್ಯಾಸ್ ಪೂರೈಸುವ ಸಿಬ್ಬಂದಿಗಳು ಸಹ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ವಸೂಲು ಮಾಡುತ್ತಿದ್ದಾರೆ. ಗ್ರಾಹಕರಿಗೆ ಮೋಸ ಮಾಡಿ, ಗ್ಯಾಸ್ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಮತ್ತು ರಾಜಾರೋಷವಾಗಿ ಹಗಲು ದರೋಡೆಗೆ ನಿಂತಿರುವ ಇಂತಹ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅವುಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದರು.
Kshetra Samachara
13/03/2026 04:44 pm