ಬಳ್ಳಾರಿ: ಬಳ್ಳಾರಿ ನಗರದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ತೀವ್ರ ಕೊರತೆ ಎದುರಾಗಿದ್ದು, ಗಣಿನಾಡಿನ ಹಲವು ಹೋಟೆಲ್ಗಳಲ್ಲಿ ಆಹಾರ ತಯಾರಿಕೆಗೆ ಭಾರಿ ಸಂಕಷ್ಟ ಎದುರಾಗಿದೆ. ಸಿಲಿಂಡರ್ ಲಭ್ಯವಾಗದೆ, ಬಹುತೇಕ ಹೋಟೆಲ್ಗಳು ದೋಸೆ ಹೊರತುಪಡಿಸಿ ಇತರೆ ತಿಂಡಿ ತಿನಿಸುಗಳ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ.
ಮೆನುವಿನಿಂದ ಹಲವು ಖಾದ್ಯಗಳು ಔಟ್
ಸಿಲಿಂಡರ್ ಕೊರತೆಯಿಂದಾಗಿ, ಇಡ್ಲಿ, ಪೂರಿ, ಉಪ್ಪಿಟ್ಟು, ಚಿತ್ರಾನ್ನ, ಪಲಾವ್ ಸೇರಿದಂತೆ ಹಲವು ಜನಪ್ರಿಯ ತಿಂಡಿಗಳನ್ನು ಹೋಟೆಲ್ಗಳು ತಮ್ಮ ಮೆನುವಿನಿಂದ ಕೈಬಿಟ್ಟಿವೆ. ಪ್ರಸ್ತುತ, ಗ್ರಾಹಕರಿಗೆ ಬೆಣ್ಣೆ ದೋಸೆ, ಮಸಾಲೆ ದೋಸೆ ಹಾಗೂ ಸೆಟ್ ದೋಸೆ ಮಾತ್ರ ಲಭ್ಯವಾಗುತ್ತಿವೆ. ಕೆಲವು ಹೋಟೆಲ್ಗಳು ಸಿಲಿಂಡರ್ ಕೊರತೆ ನೀಗಿಸಲು ಕಟ್ಟಿಗೆ ಒಲೆಗಳನ್ನು ಬಳಸಿ ದಾವಣಗೆರೆ ಶೈಲಿಯ ಬೆಣ್ಣೆ ದೋಸೆ ತಯಾರಿಸುತ್ತಿರುವುದು ವಿಶೇಷ. ಬಳ್ಳಾರಿಯ ಪ್ರಸಿದ್ಧ 'ದಾವಣಗೆರೆ ಬೆಣ್ಣೆ ದೋಸೆ' ಹೋಟೆಲ್ಗಳಲ್ಲಿಯೂ ದೋಸೆಯೊಂದೇ ಮೆನುವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸಿದೆ.
ಕುಸಿದ ವ್ಯಾಪಾರ, ಮಾಲೀಕರ ಆತಂಕ
ಮೆನು ಐಟಂಗಳು ಕಡಿಮೆಯಾದ ಕಾರಣ ಹೋಟೆಲ್ಗಳ ವ್ಯಾಪಾರ ತೀವ್ರವಾಗಿ ಕುಸಿದಿದೆ ಎಂದು ಮಾಲೀಕರು ತಿಳಿಸಿದ್ದಾರೆ. "ಶೀಘ್ರದಲ್ಲೇ ವಾಣಿಜ್ಯ ಸಿಲಿಂಡರ್ ಸಮಸ್ಯೆ ಪರಿಹರಿಸದಿದ್ದರೆ, ಹೋಟೆಲ್ ನಡೆಸುವುದು ಕಷ್ಟವಾಗಲಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮೊರೆ ಹೋದ ಹೋಟೆಲ್ ಮಾಲೀಕರು
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ವಾಣಿಜ್ಯ ಸಿಲಿಂಡರ್ಗಳ ಪೂರೈಕೆಯನ್ನು ಸರಿಪಡಿಸಬೇಕು ಎಂದು ಹೋಟೆಲ್ ಮಾಲೀಕರು ಮನವಿ ಮಾಡಿದ್ದಾರೆ.
PublicNext
14/03/2026 10:07 pm