ಕೊಡಗು: ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕಿರುಂದಾಡು ಗ್ರಾಮದ ತೋಟಗಳಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು, ಬೆಳೆ ನಷ್ಟದಿಂದ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಅಪಾರ ಬೆಳೆ ಹಾನಿ ಮತ್ತು ರೈತರ ಸಂಕಷ್ಟ
ಕಿರುಂದಾಡು ಗ್ರಾಮದ ಚೆರುಮಂದಂಡ ವಿವೇಕ್, ಶೋಭಿತ, ಪಾಡಿಚಟ್ಟಿರ ಲೀಲಾ, ಬಿಟ್ಟೀರ ಮಾದಪ್ಪ, ರಾಘವಯ್ಯ, ಮನು ಸೇರಿದಂತೆ ಹಲವು ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಕಾಫಿ, ಕಾಳುಮೆಣಸು, ಬಾಳೆ ಹಾಗೂ ಇತರೆ ಕೃಷಿ ಗಿಡಗಳನ್ನು ತುಳಿದು ನಾಶಪಡಿಸಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು, ಆರ್ಥಿಕವಾಗಿ ಹೈರಾಣಾಗಿದ್ದಾರೆ.
ಜೀವಭಯದಲ್ಲಿ ಗ್ರಾಮಸ್ಥರು ಮತ್ತು ಕಾರ್ಮಿಕರು
ಬೆಳಂಬೆಳಗ್ಗೆ ಎರಡು ಕಾಡಾನೆಗಳು ರಾಜಾರೋಷವಾಗಿ ತೋಟದೊಳಗೆ ಸವಾರಿ ನಡೆಸುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಕಾಡಾನೆಗಳ ನಿರಂತರ ಉಪಟಳದಿಂದಾಗಿ ತೋಟದ ಕೆಲಸಕ್ಕೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಈ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಮತ್ತು ರೈತರು ಪ್ರತಿದಿನವೂ ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅರಣ್ಯ ಇಲಾಖೆಗೆ ತುರ್ತು ಕ್ರಮಕ್ಕೆ ಒತ್ತಾಯ
ಜೀವ ಹಾನಿಯಾಗುವ ಮುನ್ನವೇ ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಲು ಅಥವಾ ಸೆರೆಹಿಡಿದು ಸ್ಥಳಾಂತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಕಾಡಾನೆಗಳಿಂದ ನಷ್ಟ ಸಂಭವಿಸಿದ ತೋಟದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
PublicNext
15/03/2026 01:55 pm
LOADING...