ಮೈಸೂರು: ಬಾಕಿ ಸಂಬಳ ಬಿಡುಗಡೆ ಮಾಡಲು ಲಂಚ ಸ್ವೀಕರಿಸುತ್ತಿದ್ದ ಹುಣಸೂರು ತಾಲೂಕು ಮುಳ್ಳೂರು ಗ್ರಾಮ ಪಂಚಾಯ್ತಿ ಪಿಡಿಓ ಮಂಜುಳಾ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಚೇರಿಯಲ್ಲೇ 25 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ನೀರುಗಂಟಿಯಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿ ಎಂಬುವರು ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟಿದ್ದರು. ಅವರ ನಿಧನದ ಬಳಿಕ, ಅನುಕಂಪದ ಆಧಾರದ ಮೇಲೆ ಸ್ವಾಮಿ ಅವರ ಮಗ ಮಹದೇವ್ ಅವರಿಗೆ ಕೆಲಸ ಸಿಕ್ಕಿತ್ತು. ತಂದೆ ಕರ್ತವ್ಯ ನಿರ್ವಹಿಸಿದ್ದ ಎರಡು ವರ್ಷಗಳ ಬಾಕಿ ಸಂಬಳವನ್ನು ಪಡೆಯಲು ಮಹದೇವ್ ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಲಂಚಕ್ಕೆ ಬೇಡಿಕೆ, ಲೋಕಾಯುಕ್ತ ಕಾರ್ಯಾಚರಣೆ
ಮೃತ ಸ್ವಾಮಿ ಅವರ ಸುಮಾರು ನಾಲ್ಕು ಲಕ್ಷ ರೂಪಾಯಿ ಬಾಕಿ ಸಂಬಳ ಬಿಡುಗಡೆ ಮಾಡಲು ಪಿಡಿಓ ಮಂಜುಳಾ, ಮಹದೇವ್ ಅವರಿಂದ 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮಂಜುಳಾ ಅವರ ನಿರಂತರ ಕಿರುಕುಳದಿಂದ ಬೇಸತ್ತ ಮಹದೇವ್, ಅಂತಿಮವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಹದೇವ್ ಅವರಿಂದ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪಿಡಿಓ ಮಂಜುಳಾ ಅವರನ್ನು ರೆಡ್ ಹ್ಯಾಂಡಾಗಿ ಹಿಡಿದು ಬಂಧಿಸಿದ್ದಾರೆ.
PublicNext
17/03/2026 10:56 am
LOADING...