ಚಿಕ್ಕಮಗಳೂರು: ತಾಲ್ಲೂಕಿನ ಆಣೂರು ಗ್ರಾಮ ಪಂಚಾಯತಿಯ ನೀರುಗಂಟಿ ರಮೇಶ್ ಹೆಚ್.ಡಿ. ಅವರ ಆತ್ಮಹತ್ಯೆಗೆ ವೇತನ ಬಾಕಿ ಕಾರಣವಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ 11 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದ್ದು, ಫೆಬ್ರವರಿ 2026ರ ವರೆಗಿನ ಎಲ್ಲಾ ವೇತನವನ್ನು ಪಂಚತಂತ್ರ ತಂತ್ರಾಂಶದ ಮೂಲಕ ಪಾವತಿಸಲಾಗಿದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಲ್ಲಿಸಿರುವ ವರದಿಯ ಪ್ರಕಾರ, ರಮೇಶ್ ಅವರ ಸಾವಿಗೆ ಸಾಲದ ಬಾಧೆಯೇ ಮುಖ್ಯ ಕಾರಣವಾಗಿದೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ರಮೇಶ್ ಅವರು ಐಡಿಬಿಐ ಬ್ಯಾಂಕ್ನಲ್ಲಿ ಹಾಗೂ ಅವರ ಪತ್ನಿ ಶಿವಮ್ಮ ಅವರು ಧರ್ಮಸ್ಥಳ ಸ್ವಸಹಾಯ ಸಂಘ ಮತ್ತು ಗ್ರಾಮೀಣ ಕೂಟದಲ್ಲಿ ಮಾಡಿದ್ದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಉಲ್ಲೇಖವಾಗಿದೆ. ಹೀಗಾಗಿ ವೇತನ ವಿಳಂಬದಿಂದ ಈ ಘಟನೆ ಸಂಭವಿಸಿದೆ ಎಂಬ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪಂಚಾಯತ್ ರಾಜ್ ಆಯುಕ್ತೆ ಡಾ. ಅರುಂಧತಿ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
Kshetra Samachara
18/03/2026 10:22 pm
LOADING...