ಚಿಕ್ಕಬಳ್ಳಾಪುರ : ಮನೆ ಹಾಗೂ ತಮ್ಮ ಜಮೀನುಗಳಲ್ಲಿ ಯುಗಾದಿ ಹಾಗೂ ಹೊಸತೊಡಕು ಹಬ್ಬವನ್ನು ಆಚರಿಸಬೇಕಾದ ರೈತರು ಯುಗಾದಿ ಹಾಗೂ ಹೊಸತೊಡಕು ಹಬ್ಬವನ್ನು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸೌದೆಯ ಒಲೆ ಇಟ್ಟು ಹೋಳಿಗೆ ಅನ್ನ,ಮುದ್ದೆ,ಚಿಕನ್ ಸಾರು ಸೇರಿದಂತೆ ಹಬ್ಬದ ಊಟವನ್ನು ರಸ್ತೆಯ ಪಕ್ಕದಲ್ಲಿ ತಯಾರಿ ನಡೆಸಿ ಹಬ್ಬವನ್ನು ನೋವಿನಲ್ಲೇ ಆಚರಣೆ ಮಾಡಲಾಯಿತು.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಸುಮಾರು 2300 ಎಕರೆ ಜಮೀನನ್ನು ರಾಜ್ಯ ಸರ್ಕಾರ ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿರುವ ಹದಿಮೂರು ಹಳ್ಳಿಗಳ ರೈತರು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಧರಣಿಯನ್ನು ಕೈಗೊಂಡಿದ್ದು ಯುಗಾದಿ ಹಾಗೂ ಹೊಸತೊಡಕು ಹಬ್ಬದ ಸಂಭ್ರಮವನ್ನು ನೇಗಿಲಿಗೆ ಪೂಜೆ ಮಾಡಿ, ಸಾಂಕೇತಿಕವಾಗಿ ಮೊಳಕೆಯನ್ನು ಬಿತ್ತುವ ಮೂಲಕ ಬೇವು ಬೆಲ್ಲ ತಿಂದು ಹಬ್ಬವನ್ನು ಆಚರಣೆ ಮಾಡಿದರು.
ನಮ್ಮ ಮನೆಗಳಲ್ಲಿ ಯುಗಾದಿ ಹಬ್ಬದ ಸಂಭ್ರಮಾಚರಣೆಯನ್ನು ಮಾಡಬೇಕಾದ ನಾವು ರಾಜ್ಯ ಸರ್ಕಾರದ ನಡೆಯಿಂದ ನಾವು ಬೀದಿಗೆ ಬಂದು ಹಬ್ಬವನ್ನು ಆಚರಿಸಬೇಕಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಸೋಮವಾರದ ಒಳಗೆ ನಮ್ಮ ಭೂಮಿ ನಮಗೆ ವಾಪಸ್ ನೀಡಲಿಲ್ಲ ಎಂದರೆ ನಮ್ಮ ಮನೆಯಲ್ಲಿ ಇರುವ ದನಕರುಗಳನ್ನೆಲ್ಲ ಕರೆತಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬಿಡುತ್ತೇವೆ ಹಾಗೆಯೇ ರೈತರು ಬೆಳೆದಿರುವ ಬೆಳೆಗಳನ್ನು ತಂದು ಜಿಲ್ಲಾಡಳಿತ ಭವನದ ಮುಂದೆಯೇ ಮಿನಿ ಮಾರುಕಟ್ಟೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಒಟ್ಟಾರೆಯಾಗಿ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಕೈಗಾರಿಕೀಕರಣಕ್ಕೆ ಭೂಮಿಯನ್ನು ನೀಡುವುದಿಲ್ಲ. ರಕ್ತವನ್ನು ಬೇಕಾದರೂ ಕೊಡುತ್ತೇವೆ ಹೊರತು ಭೂಮಿಯನ್ನು ಕೈಗಾರಿಕೆಗೆ ಬಿಡುವುದಿಲ್ಲ ಎಂದು ಅಹೋರಾತ್ರಿ ಹೋರಾಟದ ಧರಣಿಯನ್ನು ಹಮ್ಮಿಕೊಂಡಿದ್ದಾರೆ.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
20/03/2026 10:11 pm