ಬೆಂಗಳೂರು: ದಾವಣಗೆರೆ ಉಪ ಚುನಾವಣೆ ಹಿನ್ನೆಲೆ ಟಿಕೆಟ್ಗಾಗಿ ಅಲ್ಪಸಂಖ್ಯಾತರು ಪಟ್ಟು ಸಡಿಲಿಸದ ಕಾರಣ ಟಿಕೆಟ್ ಗೊಂದಲ ಮುಂದುವರೆದಿದೆ. ಶುಕ್ರವಾರ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಈಗಾಗಲೇ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯಾಗಿ ಸಾದಿಕ್ ಪೈಲ್ವಾನ್ ಹುರಿಯಾಳುತನವನ್ನು ಪ್ರದರ್ಶಿಸಿದ್ದಾರೆ. ಆದರೆ, ಈ ಬೆಳವಣಿಗೆಯಿಂದಾಗಿ ದಾವಣಗೆರೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚಿದೆ. ಮತ್ತೊಂದೆಡೆ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ತಮ್ಮ ಕುಟುಂಬ ಕುಡಿಗೇ ಟಿಕೆಟ್ ದೊರೆಯಬೇಕೆಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ದಂಪತಿ ಬಿಗಿ ಹಿಡಿತ ಸಾಧಿಸುತ್ತಿದ್ದರೆ, ಅಲ್ಪಸಂಖ್ಯಾತ ಸಮುದಾಯದ ನಾಯಕರು ಹೇಳೋದೇ ಬೇರೆ. ದಾವಣಗೆರೆ ದಕ್ಷಿಣ ಈ ಬಾರಿ ಮುಸ್ಲಿಮರಿಗೆ ದಕ್ಕಬೇಕು.
ಶಾಮನೂರು ಶಿವಶಂಕರಪ್ಪ ಅವರ ಬಳಿಕ ಅವರ ಮೊಮ್ಮಗನೇ ಶಾಸಕನಾಗಬೇಕೆಂಬ ನಿಯಮವೇನಿಲ್ಲ. ಇದು ಪ್ರಜಾಪ್ರಭುತ್ವ. ನಾವು ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಇಷ್ಟು ದಿನ ಶ್ರಮಿಸಿದ್ದೇವೆ. ಈ ಬಾರಿ ನಮ್ಮ ಸಮುದಾಯದ ಅಭ್ಯರ್ಥಿಗೇ ಪಕ್ಷ ಟಿಕೆಟ್ ನೀಡಬೇಕೆಂದು ಈ ಕ್ಷಣದವರೆಗೂ ಪಟ್ಟು ಹಿಡಿದಿರೋದು ಹೈಕಮಾಂಡ್ ತಲೆಬಿಸಿ ಉಂಟು ಮಾಡಿದೆ. ಎಐಸಿಸಿ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಕೂಡ ಎರಡೂ ಬಣಗಳ ನಡುವೆ ಸಹಮತ ಮೂಡಿಸುವಲ್ಲಿ ವಿಫಲರಾಗಿದ್ದು, ಇದೀಗ ಹೈಕಮಾಂಡ್ ನಿರ್ಣಯದತ್ತ ತಮ್ಮ ಚಿತ್ತವನ್ನು ನೆಟ್ಟಂತಿದೆ. ಕಾಂಗ್ರೆಸ್ ನ ಆಪ್ತ ಮೂಲಗಳ ಪ್ರಕಾರ, ಇದು ಮೇಲ್ನೋಟಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಅಲ್ಪಸಂಖ್ಯಾತ ಸಮುದಾಯದವರ ಮಧ್ಯೆ ನಡೆಯುತ್ತಿರೋ ಟಿಕೆಟ್ ಗಾಗಿ ಫೈಟ್ ಆಗಿದ್ದರೂ ಕೂಡ ಇದರ ಬೆನ್ನ ಹಿಂದೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ನೆರಳಿದೆ.
ದಾವಣಗೆರೆಯ ಈ ಬಾರಿಯ ಉಪ ಚುನಾವಣೆಯಲ್ಲಿ ನಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂದು ಸಚಿವ ಜಮೀರ್ ಖಾನ್ ಧ್ವನಿ ಎತ್ತಿದಾಗ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಇವರಿಬ್ಬರ ನಡುವೆ ಮಾತಿನ ಜಟಾಪಟಿಯೇ ನಡೆದಿತ್ತು. ಬರೀ ಸಚಿವ ಜಮೀರ್ ಖಾನ್ ಅವರ ವಿರೋಧವಿದ್ದಿದ್ದರೆ ಸಮಸ್ಯೆ ಇಷ್ಟೊತ್ತಿಗಾಗಲೇ ಬಗೆಹರಿದು ಬಿಡುತ್ತಿತ್ತು. ಆದರೆ, ಜಮೀರ್ ಅವರ ಬೆನ್ನಿಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿದ್ದಾರೆಂದೂ ಹೇಳಲಾಗುತ್ತಿದೆ.
ಮತ್ತೊಂದೆಡೆ, ಸಚಿವ ಜಮೀರ್ ಅಹಮ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ತನ್ವೀರ್ ಶೇಟ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ಅವರು ಸೇರಿದಂತೆ ಮುಂತಾದ ಮುಸ್ಲಿಂ ಸಮುದಾಯದ ಮುಖಂಡರು ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರೋದು ಕುತೂಹಲ ಮೂಡಿಸಿದೆ.
PublicNext
21/03/2026 05:12 pm