ಹಗರಿಬೊಮ್ಮನಹಳ್ಳಿ: ಕೃಷಿ ಪಂಪ್ಸೆಟ್ಗಳಿಗೆ ಸಂಪರ್ಕ ಕಲ್ಪಿಸಲು ರೈತರು ಅಳವಡಿಸಿದ್ದ ವಿದ್ಯುತ್ ವಯರ್ ತಗುಲಿದ ಪರಿಣಾಮ, ಲಕ್ಷಾಂತರ ರೂಪಾಯಿ ಮೌಲ್ಯದ ಚಿಪ್ಸ್ ಪ್ಯಾಕೆಟ್ಗಳನ್ನು ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ವಾಹನವೊಂದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿಲ್ಲೋಬನಹಳ್ಳಿ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನಿಂದ ಹಡಗಲಿ ಪಟ್ಟಣಕ್ಕೆ ಚಿಪ್ಸ್ ಬಾಕ್ಸ್ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಈ ಕ್ಯಾಂಟರ್ ಲಾರಿಗೆ ಪಿಲ್ಲೋಬನಹಳ್ಳಿ ಬಳಿ ವಿದ್ಯುತ್ ತಂತಿ ತಗುಲಿದೆ. ಹೊಲಗಳಿಗೆ ವಿದ್ಯುತ್ ಪೂರೈಸಲು ರೈತರು ಅಳವಡಿಸಿದ್ದ ವಯರ್ ಲಾರಿಯ ಮೇಲ್ಭಾಗಕ್ಕೆ ಸ್ಪರ್ಶಿಸಿದ್ದು, ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹತ್ತಿಕೊಂಡಿದ್ದನ್ನು ಗಮನಿಸದ ಚಾಲಕ, ವಾಹನವನ್ನು ನೂರಾರು ಮೀಟರ್ಗಳವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಈ ವೇಳೆ ವಾಹನದ ಹಿಂಭಾಗದಲ್ಲಿ ಬೆಂಕಿಯ ಕೆನ್ನಾಲಿಗೆ ಕಂಡುಬಂದಾಗ, ಹಾದಿಹೋಕರು ಮತ್ತು ಸ್ಥಳೀಯರು ಕಿರುಚಾಡಿ ಸನ್ನೆ ಮಾಡುವ ಮೂಲಕ ಚಾಲಕನ ಗಮನ ಸೆಳೆದಿದ್ದಾರೆ. ಕೂಡಲೇ ಚಾಲಕ ವಾಹನವನ್ನು ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಇಡೀ ಕ್ಯಾಂಟರ್ ಹಾಗೂ ಅದರಲ್ಲಿದ್ದ ಚಿಪ್ಸ್ ಪ್ಯಾಕೆಟ್ಗಳು ಧಗಧಗ ಹೊತ್ತಿ ಉರಿದಿವೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರಾದರೂ, ಅಷ್ಟೊತ್ತಿಗಾಗಲೇ ವಾಹನ ಮತ್ತು ಸರಕು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
27/03/2026 09:10 pm