ಮೈಸೂರು: ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರಿನಲ್ಲಿ ಹೃದಯ ಕಲಕುವ ದುರಂತವೊಂದು ಸಂಭವಿಸಿದೆ. ದಾಸವಾಳ ಹೂವಿನ ದಿಂಡು ನುಂಗಿ ಶ್ವಾಸಕೋಶದಲ್ಲಿ ಸಿಲುಕಿದ ಪರಿಣಾಮ, 7 ತಿಂಗಳ ಮಗು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದೆ.
ಹನಗೋಡು ಹೋಬಳಿಯ ದೊಡ್ಡಹೆಜ್ಜೂರಿನ ಸುದರ್ಶನ್ ಹಾಗೂ ನವ್ಯ ದಂಪತಿಯ ಎರಡನೇ ಪುತ್ರ ಚಿನ್ಮಯ್ ಗೌಡ ಮೃತಪಟ್ಟ ಮಗು.
ಘಟನೆ ನಡೆದಿದ್ದು ಹೇಗೆ?
ಮನೆಯ ಹೊಸ್ತಿಲಿಗೆ ಪೂಜೆ ಮಾಡಿ ದಾಸವಾಳ ಹೂವುಗಳನ್ನು ಇಡಲಾಗಿತ್ತು. ಈ ವೇಳೆ ಮಗು ಚಿನ್ಮಯ್ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ. ಪೂಜೆಗಾಗಿ ಇಟ್ಟಿದ್ದ ದಾಸವಾಳ ಹೂವಿನ ಹಸಿರು ದಿಂಡಿನ ಭಾಗವನ್ನು ಕಿತ್ತು ಬಾಯಿಗೆ ಹಾಕಿಕೊಂಡಿದ್ದಾನೆ. ಇದನ್ನು ಗಮನಿಸಿದ ಅಣ್ಣ, ತಕ್ಷಣ ಹೂವನ್ನು ಹೊರತೆಗೆಯಲು ಪ್ರಯತ್ನಿಸಿದ್ದನಾದರೂ, ಅಷ್ಟರಲ್ಲೇ ಚಿನ್ಮಯ್ ಆ ದಿಂಡನ್ನು ನುಂಗಿಬಿಟ್ಟಿದ್ದಾನೆ. ದುರದೃಷ್ಟವಶಾತ್, ಮಗು ನುಂಗಿದ ಹೂವಿನ ಭಾಗವು ನೇರವಾಗಿ ಶ್ವಾಸಕೋಶಕ್ಕೆ ಹೋಗಿ ಸಿಲುಕಿಕೊಂಡಿದೆ.
ಇದರಿಂದಾಗಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ತಕ್ಷಣ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಚಿಕಿತ್ಸೆ ಫಲಕಾರಿಯಾಗದೆ ಚಿನ್ಮಯ್ ಸಾವನ್ನಪ್ಪಿದ್ದಾನೆ.
PublicNext
30/03/2026 04:50 pm
LOADING...