ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ನೀರಾನೆ ದಾಳಿಗೆ ಮೃತಪಟ್ಟ ತರಬೇತಿನಿರತ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಪಾಲಕರು ಬುಧವಾರ ತುಂಗಾನಗರ ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿದರು.
ಪೊಲೀಸರ ಮನವಿ ಮೇರೆಗೆ ತಂದೆ ಧ್ರುವಕುಮಾರ್ ರೆಡ್ಡಿ, ತಾಯಿ ಶೈಲಜಾ ರೆಡ್ಡಿ ಮತ್ತು ಸೋದರ ಮಾವ ರಾಜಶೇಖರ್ ಅವರು ತುಂಗಾನಗರ ಠಾಣೆಗೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಸಮಯ ದಂಪತಿ ಹೇಳಿಕೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾಯಿ ಶೈಲಜಾ ರೆಡ್ಡಿ, ಪುತ್ರಿ ಡಾ. ಸಮೀಕ್ಷಾ ರೆಡ್ಡಿ ಸಾವಿನ ದಿನ ನಮಗೆ ಮಾತನಾಡುವ ಶಕ್ತಿ ಇರಲಿಲ್ಲ. ಪೊಲೀಸರು ಹೇಳಿಕೆ ತೆಗೆದುಕೊಳ್ಳಲು ಕರೆದಿದ್ದರು. ಪೊಲೀಸರ ಮುಂದೆ ಎಲ್ಲ ಹೇಳಿಕೆಗಳನ್ನು ನೀಡಿದ್ದೇವೆ. ಪೊಲೀಸರು ಉತ್ತಮವಾಗಿ ತನಿಖೆ ಮಾಡುತ್ತಿದ್ದು, ಗೊತ್ತಿಲ್ಲದೇ ಏನು ಮಾತಾಡಬಾರದು ಎಂದರು.
ನನ್ನ ಮಗಳು ಡಾ. ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ಬೇಕಿದೆ. ಮಗಳಂತೂ ಹೋದಳು. ಮರಳಿ ಬರುವುದಿಲ್ಲ. ಇರುವ ಪಶುವೈದ್ಯರಾದರೂ ಧೈರ್ಯವಾಗಿ ಕೆಲಸ ಮಾಡುವ ವಾತಾವರಣ ಮೃಗಾಲಯಗಳಲ್ಲಿ ಬರಬೇಕು. ಅವರ ಎಸ್ಒಪಿ ನಿಯಮಗಳು ಸರಿಯಾಗಿ ಪಾಲನೆಯಾಗಬೇಕು. ಪಶುವೈದ್ಯರಾದ ಮೇಲೆ ಒತ್ತಡ ಇದ್ದೇ ಇರುತ್ತದೆ. ಸಫಾರಿಯಲ್ಲಿನ ಸಮಸ್ಯೆಗಳ ಬಗ್ಗೆ ಮಗಳು ಹೇಳುತ್ತಿದ್ದಳು. ಆಕೆಯನ್ನು ಅಷ್ಟೊತ್ತಿಗೆ ಕರೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಯುಗಾದಿ ಹಬ್ಬಕ್ಕೆ ಬಾರದೇ ಕೆಲಸ ಮಾಡಿದ್ದಾಳೆ. ಒಬ್ಬ ತಾಯಿಯಾಗಿ ನನಗೂ ಭಯವಿದೆ. ಇದೇ ರೀತಿ ಬೇರೆ ತಾಯಂದಿರು ಭಯ ಪಡುತ್ತಿದ್ದಾರೆ. ಮುಂದೆ ಈ ರೀತಿ ಯಾರಿಗೂ ಆಗಬಾರದು ಎಂದರು.
ನೀರಾನೆ ದಾಳಿಗೆ ಡಾ. ಸಮೀಕ್ಷಾ ರೆಡ್ಡಿ ಸಾವಿನ ಪ್ರಕರಣದಲ್ಲಿ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರ ನಿರ್ಲಕ್ಷ್ಯ ಇದೆ ಎಂದು ಸಮೀಕ್ಷಾ ಅವರ ಸೋದರಮಾವ ರಾಜಶೇಖರ್ ಆರೋಪಿಸಿದರು. ಮೊದಲಿಗೆ ಯುಡಿಆರ್ ದಾಖಲಿಸಿದ್ದೆವು. ಆ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಪಾಲಕರ ಹೇಳಿಕೆ ದಾಖಲು ಮಾಡಲಾಗಿದೆ. ಸಮೀಕ್ಷಾ ಮೊಬೈಲ್ ಫೋನ್ ಎಫ್ಎಸ್ಎಲ್ಗೆ ಕಳಿಸಿದ್ದಾರೆ. ಆಕೆಗೆ ಕೊನೆಯದಾಗಿ ಯಾರು ಕರೆ ಮಾಡಿದ್ದರು, ಏನು ಸೂಚನೆ ಕೊಟ್ಟಿದ್ದರು ಎಂಬುದು ತನಿಖೆಯಿಂದ ತಿಳಿಯಲಿದೆ. ಹಾಗೇನಾದರೂ ಇದ್ದರೆ ಯುಡಿಆರ್ ಇರುವುದು ಎಫ್ಐಆರ್ ಆಗಿ ಬದಲಾಗಲಿದೆ ಎಂದರು.
PublicNext
02/04/2026 09:36 am