ಹೈದರಾಬಾದ್: ಅಂತರ್ಜಾತಿ ವಿವಾಹವನ್ನು ಕುಟುಂಬದವರು ವಿರೋಧಿಸಿದ್ದರಿಂದ ಮನನೊಂದ ನವದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ನಡೆದಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಅನುಮೂಲ ರಾಕೇಶ್ ರೆಡ್ಡಿ (25) ಮತ್ತು ತರಿಗೊಪ್ಪುಲ ಹರಿಕಾ (22) ಆತ್ಮಹತ್ಯೆಗೆ ಶರಣಾದ ದಂಪತಿ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರಾಕೇಶ್ ಮತ್ತು ಹರಿಕಾ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಮದುವೆಯ ನಂತರ ಹೈದರಾಬಾದ್ಗೆ ತೆರಳಿದ್ದ ಈ ದಂಪತಿ, ಸುಮಾರು ಮೂರು ತಿಂಗಳ ಹಿಂದೆ ತಮ್ಮ ಸಿದ್ದಿಪೇಟೆ ಜಿಲ್ಲೆಯ ಹಳ್ಳಿಗೆ ಮರಳಿದ್ದರು. ರಾಕೇಶ್ ಅವರ ಪೋಷಕರು ಹರಿಕಾ ಬೇರೆ ಜಾತಿಗೆ ಸೇರಿದವರಾಗಿದ್ದರಿಂದ ಈ ಮದುವೆಯನ್ನು ಒಪ್ಪಿರಲಿಲ್ಲ. ಇದರಿಂದ ದಂಪತಿ ತೀವ್ರವಾಗಿ ಮನನೊಂದಿದ್ದರು ಎನ್ನಲಾಗಿದೆ.
ಮದುವೆಗೆ ಕುಟುಂಬದ ವಿರೋಧದ ನಡುವೆಯೇ, ಮಾರ್ಚ್ 28ರಂದು ರಾಕೇಶ್ ರೆಡ್ಡಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 30ರಂದು ಅವರು ಕೊನೆಯುಸಿರೆಳೆದರು. ಪತಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಹರಿಕಾ, ಏಪ್ರಿಲ್ 2ರಂದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಕಾ ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ. ಆಗ ಪೊಲೀಸರು ಮಧ್ಯಪ್ರವೇಶಿಸಿ ದಂಪತಿಗೆ ಸಲಹೆ ನೀಡಿದ ನಂತರ, ರಾಕೇಶ್ ರೆಡ್ಡಿ ಅವರ ಪೋಷಕರು ಇಷ್ಟವಿಲ್ಲದಿದ್ದರೂ ವಿವಾಹಕ್ಕೆ ಒಪ್ಪಿಕೊಂಡಿದ್ದರು. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PublicNext
04/04/2026 05:21 pm
LOADING...