ಶಿಗ್ಗಾವಿ: ಕರ್ನಾಟಕ ಪೊಲೀಸ್ ಇಲಾಖೆಯು ಇಡೀ ದೇಶದಲ್ಲೇ ತನ್ನ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದೆ. ಎಂತಹ ಜಟಿಲ ಪ್ರಕರಣಗಳನ್ನೂ ಲೀಲಾಜಾಲವಾಗಿ ಭೇದಿಸುವ ಚಾಣಾಕ್ಷತನ ನಮ್ಮ ಪೊಲೀಸರದ್ದಾಗಿದೆ. ಆದರೆ, ಇಂತಹ ಇಲಾಖೆಯ ಘನತೆಗೆ ಕುಂದು ತರುವಂತಹ ಘಟನೆಯೊಂದು ಶಿಗ್ಗಾವಿಯಲ್ಲಿ ನಡೆದಿದೆ.
ಏನಿದು ಘಟನೆ?: ಶಿಗ್ಗಾವಿ ಹೊರವಲಯದ ಡಾಬಾವೊಂದರಲ್ಲಿ ಶಿಗ್ಗಾವಿ ಠಾಣೆಯ ನಾಲ್ವರು ಪೊಲೀಸರು ಸಮವಸ್ತ್ರದಲ್ಲೇ ‘ಎಣ್ಣೆ ಪಾರ್ಟಿ’ ಮಾಡುತ್ತಿರುವುದು ‘ಪಬ್ಲಿಕ್ ನೆಕ್ಸ್ಟ್’ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಗಲಿರುಳು ಸಾರ್ವಜನಿಕರ ರಕ್ಷಣೆಯಲ್ಲಿರಬೇಕಾದ ಪೊಲೀಸರು, ಡ್ಯೂಟಿ ಸಮಯದಲ್ಲಿ ಮದ್ಯದ ಅಮಲಿನಲ್ಲಿ ತೇಲುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹಾರಿಕೆ ಉತ್ತರ ನೀಡಿದ ಪೊಲೀಸರು: ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದಂತೆ ತಬ್ಬಿಬ್ಬಾದ ಪೊಲೀಸರು, ಕೈಯಲ್ಲಿದ್ದ ಬಿಯರ್ ಬಾಟಲಿಗಳನ್ನು ಬಚ್ಚಿಡುವ ಪ್ರಯತ್ನ ನಡೆಸಿದರು. "ನಮ್ಮ ಡ್ಯೂಟಿ ಮುಗಿದಿದೆ, ಅದಕ್ಕೆ ಇಲ್ಲಿಗೆ ಬಂದಿದ್ದೇವೆ" ಎಂದು ಹಾರಿಕೆ ಉತ್ತರ ನೀಡುವ ಮೂಲಕ ನುಣುಚಿಕೊಳ್ಳಲು ಯತ್ನಿಸಿದರು. ಆದರೆ, ಸಮವಸ್ತ್ರ ಧರಿಸಿರುವಾಗಲೇ ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿರುವುದು ಪೊಲೀಸ್ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಕ್ರಮಕ್ಕೆ ಆಗ್ರಹ: "ಸಾಮಾನ್ಯ ಜನರಿಗೆ ಒಂದು ನ್ಯಾಯ, ಪೊಲೀಸರಿಗೆ ಮತ್ತೊಂದು ನ್ಯಾಯವೇ?" ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ಗಂಭೀರ ವಿಚಾರಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರು ಶಿಸ್ತು ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
PublicNext
22/04/2026 09:43 pm
LOADING...