ಕಿಯೋಂಜಾರ್ (ಒಡಿಶಾ) : ಒಂದು ಕುಟುಂಬದ ನೋವು ಒಂದು ವ್ಯವಸ್ಥೆಯ ಮೊಂಡುತನ ಮನಸ್ಸನ್ನೇ ಕಲುಕುವ ಕಥೆ ಇದು.
ಹೌದು ದಾಖಲೆಗಳ ಹೆಸರಿನಲ್ಲಿ ಸಾಮಾನ್ಯ ಜನರನ್ನು ಬ್ಯಾಂಕುಗಳು ಹೇಗೆ ಅಲೆದಾಡಿಸುತ್ತವೆ ಎಂಬುದಕ್ಕೆ ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಜ್ವಲಂತ ಉದಾಹರಣೆಯಾಗಿದೆ.
ತನ್ನ ಸಹೋದರಿ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಹರಸಾಹಸ ಪಟ್ಟ ವ್ಯಕ್ತಿಯೊಬ್ಬರು, ವಿಧಿಯಿಲ್ಲದೆ ಸಮಾಧಿಯಿಂದ ಸಹೋದರಿಯ ಅಸ್ಥಿಪಂಜರವನ್ನು ಹೊತ್ತು ಬ್ಯಾಂಕ್ಗೆ ತಂದ ಘೋರ ಘಟನೆ ನಡೆದಿದೆ.
ಹೌದು ದಿಯಾನಾಲಿ ಗ್ರಾಮದ ನಿವಾಸಿ ಜೀತು ಮುಂಡಾ (50) ಎಂಬುವವರ ಹಿರಿಯ ಸಹೋದರಿ ಕಲ್ರಾ ಮುಂಡಾ (56) ಅವರು ಕಳೆದ ಜನವರಿ 26, 2026 ರಂದು ಮೃತಪಟ್ಟಿದ್ದರು. ಕಲ್ರಾ ಅವರು ಜಾನುವಾರುಗಳನ್ನು ಮಾರಿ ಸಂಪಾದಿಸಿದ್ದ ಸುಮಾರು 20,000 ರೂಪಾಯಿ ಹಣ ಬ್ಯಾಂಕ್ ಖಾತೆಯಲ್ಲಿತ್ತು. ಜೀತು ಈ ಹಣವನ್ನು ಪಡೆಯಲು ಕಿಯೋಂಜಾರ್ ಜಿಲ್ಲೆಯ ಪಟಾನಾ ಬ್ಲಾಕ್ನಲ್ಲಿರುವ ಒಡಿಶಾ ಗ್ರಾಮೀಣ ಬ್ಯಾಂಕ್ನ ಮಾಲಿಪೋಸಿ ಶಾಖೆಗೆ ಹಲವು ಬಾರಿ ಅಲೆದಿದ್ದರು.
ಜೀತು ಅವರ ಪ್ರಕಾರ, ಅವರು ಬ್ಯಾಂಕ್ಗೆ ಹೋದಾಗಲೆಲ್ಲಾ ಅಧಿಕಾರಿಗಳು "ಖಾತೆದಾರರನ್ನು (ಸಹೋದರಿಯನ್ನು) ಕರೆದುಕೊಂಡು ಬನ್ನಿ" ಎಂದು ಒತ್ತಾಯಿಸುತ್ತಿದ್ದರು. ಸಹೋದರಿ ಸತ್ತು ಹೋಗಿದ್ದಾಳೆ ಎಂದು ಜೀತು ಎಷ್ಟು ಹೇಳಿದರೂ ಅಧಿಕಾರಿಗಳು ನಂಬಿರಲಿಲ್ಲ. ಇದರಿಂದ ಹತಾಶೆಗೊಂಡ ಅವರು, "ನಿಮಗೆ ಸಾಕ್ಷಿ ಬೇಕಲ್ಲವೇ? ಇವಳೇ ನನ್ನ ಸಹೋದರಿ" ಎಂದು ತೋರಿಸಲು ಸಮಾಧಿಯನ್ನು ಅಗೆದು ಅಸ್ಥಿಪಂಜರವನ್ನೇ ಬ್ಯಾಂಕ್ಗೆ ತಂದಿದ್ದಾರೆ.
ಘಟನೆ ನಡೆದ ತಕ್ಷಣ ಪಟಾನಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಿರಣ್ ಪ್ರಸಾದ್ ಸಾಹು ಸ್ಥಳಕ್ಕೆ ಆಗಮಿಸಿದರು. ಅವರ ಪ್ರಕಾರ,"ಜೀತು ಅನಕ್ಷರಸ್ಥ ಬುಡಕಟ್ಟು ವ್ಯಕ್ತಿ. ಮೃತ ವ್ಯಕ್ತಿಯ ಖಾತೆಯಿಂದ ಹಣ ಹಿಂಪಡೆಯುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಅವರಿಗೆ ಅರಿವಿಲ್ಲ. ಬ್ಯಾಂಕ್ ಸಿಬ್ಬಂದಿಗಳು ಅವರಿಗೆ ಸರಿಯಾಗಿ ತಿಳಿಹೇಳುವಲ್ಲಿ ವಿಫಲರಾಗಿದ್ದಾರೆ."
ಬ್ಯಾಂಕ್ ಖಾತೆಯಲ್ಲಿದ್ದ ನಾಮಿನಿಯೂ (Nominee) ಈಗಾಗಲೇ ಮೃತಪಟ್ಟಿರುವುದರಿಂದ ಜೀತು ಒಬ್ಬರೇ ಕಾನೂನುಬದ್ಧ ವಾರಸುದಾರರಾಗಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯ ನಂತರ, ಜೀತುಗೆ ತಕ್ಷಣವೇ ಹಣ ಸಿಗುವಂತೆ ಮಾಡಲು ಜಿಲ್ಲಾಡಳಿತ ಬ್ಯಾಂಕ್ಗೆ ಸೂಚನೆ ನೀಡಿದೆ.
ಸಹೋದರಿಯ ಅಸ್ಥಿಪಂಜರವನ್ನು ಪೊಲೀಸರ ಸಮ್ಮುಖದಲ್ಲಿ ಮತ್ತೆ ಸಮಾಧಿ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿಯ ಸಂವೇದನಾ ರಹಿತ ವರ್ತನೆ ಮತ್ತು ವ್ಯಕ್ತಿಯ ಹತಾಶೆ ಇಂತಹ ಘಟನೆಗಳಿಗೆ ಪುಷ್ಠಿ ನೀಡಿವೆ ಎನ್ನಬಹುದು ಈ ಘಟನೆ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಮಾನವೀಯತೆಯ ಕೊರತೆಯನ್ನು ತೋರಿಸುತ್ತವೆ.
PublicNext
28/04/2026 06:30 pm