ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಏಳು ಮಂದಿ ಬಲಿಯಾಗಿರುವುದು ಅತ್ಯಂತ ಆಘಾತಕಾರಿ ಸಂಗತಿ ಎಂದು ಮಾಜಿ ಸಚಿವ ಸಿ.ಟಿ. ರವಿ ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈ ಅನಾಹುತಕ್ಕೆ ಸರ್ಕಾರವನ್ನೇ ನೇರವಾಗಿ ದೂಷಿಸುವುದಿಲ್ಲ, ಏಕೆಂದರೆ ಇದು ಕ್ಲೌಡ್ ಬ್ಲಾಸ್ಟ್ ಮಾದರಿಯ ಅಕಾಲಿಕ ಮಳೆಯಾಗಿದೆ. ಆದರೆ ಮಳೆಗೆ ಸರ್ಕಾರ ಕಾರಣವಲ್ಲದಿದ್ದರೂ, ಸಂಕಷ್ಟದಲ್ಲಿರುವ ಜನರ ನೆರವಿಗೆ ತಕ್ಷಣ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರವು ಕುರ್ಚಿ ಕಿತ್ತಾಟದಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಬೇಕು. ಈ ಸಮಯದಲ್ಲಿ ಅಧಿಕಾರಕ್ಕಾಗಿ ದೆಹಲಿಯಲ್ಲಿ ಕುಳಿತುಕೊಳ್ಳುವುದು ಅಕ್ಷಮ್ಯ ಅಪರಾಧವಾಗುತ್ತದೆ. ಬೆಂಗಳೂರಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ನ್ಯಾಯಾಲಯಗಳ ಸೂಚನೆಗೂ ಬೆಲೆ ಸಿಗುತ್ತಿಲ್ಲ. ಹಣ ಮತ್ತು ಪ್ರಭಾವದ ಕಾರಣಕ್ಕೆ ಒತ್ತುವರಿ ನಕ್ಷೆಗಳೇ ಬದಲಾಗುತ್ತಿರುವುದು ವಿಷಾದನೀಯ. ಬೆಂಗಳೂರು 'ಮುಳುಗೂರು' ಆಗದಂತೆ ತಡೆಯಲು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಬೇಕು ಮತ್ತು ನಗರದ ಅಭಿವೃದ್ಧಿಗೆ ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.
Kshetra Samachara
29/04/2026 09:21 pm
LOADING...