* ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಸುಮಾರು 5:00 ಗಂಟೆಯ ವೇಳೆಗೆ ಆಲಿಕಲ್ಲು ಸಹಿತ ಭಾರೀ ಗಾಳಿ-ಮಳೆಯಾಗಿದೆ.
* ಅತಿ ಹೆಚ್ಚು ಮಳೆಯು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾಟನ್ಪೇಟೆ, ಬಿನ್ನಿಪೇಟೆ, ಸಂಪಂಗಿರಾಮನಗರ, ಶಿವಾಜಿನಗರ ಹಾಗೂ ಸುಭಾಷ್ ನಗರ ವಾರ್ಡ್ಗಳಲ್ಲಿ 92.00 ಮಿ.ಮೀ ದಾಖಲಾಗಿದ್ದು, ಬೆಂಗಳೂರು ಉತ್ತರ ನಗರ ಪಾಲಿಕೆಯ ಕೆಲವು ಪ್ರದೇಶಗಳಲ್ಲಿ ಕನಿಷ್ಠ 15.00 ಮಿ.ಮೀ ಮಳೆಯಾಗಿದೆ. ಸರಾಸರಿ 55.00 ಮಿ.ಮೀ ಮಳೆಯಾಗಿದೆ.
* ಆಲಿಕಲ್ಲು ಸಹಿತ ಭಾರೀ ಮಳೆಯ ಪರಿಣಾಮ ನಗರದಾದ್ಯಂತ ಅನೇಕ ಮರಗಳು ಧರೆಗುರುಳಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 226 ಮರಗಳು ಧರೆಗುರುಳಿವೆ ಹಾಗೂ 623 ಕೊಂಬೆಗಳು ಮುರಿದು ಬಿದ್ದಿವೆ. ಜೊತೆಗೆ ಮರದ ಸಣ್ಣಪುಟ್ಟ ರೆಂಬೆಗಳು ಹಾಗೂ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರಿವೆ.
* ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಧರೆಗುರುಳಿರುವುದರಿಂದ ನಗರ ಪಾಲಿಕೆಗಳ ವತಿಯಿಂದ 30 ತಂಡಗಳು ಹಾಗೂ ನಾಲ್ಕು ಕ್ರೇನ್ಗಳನ್ನು ತೆರವು ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದ 15 ತಂಡಗಳು, ಎಸ್.ಡಿ.ಆರ್.ಎಫ್ ನಿಂದ 4 ತಂಡಗಳು ಹಾಗೂ ಹೆಚ್ಚುವರಿಯಾಗಿ 10 ಖಾಸಗಿ ತಂಡಗಳನ್ನು ಬಾಡಿಗೆ ಆಧಾರದಲ್ಲಿ ನಿಯೋಜಿಸಲಾಗಿದೆ.
* ಧರೆಗುರುಳಿದ ಮರಗಳು ಹಾಗೂ ರೆಂಬೆಗಳ ಪೈಕಿ ಮಧ್ಯಾಹ್ನ 12:30 ರ ವೇಳೆಗೆ 150 ಮರಗಳು ಹಾಗೂ 384 ರೆಂಬೆಗಳನ್ನು ತೆರವುಗೊಳಿಸಲಾಗಿದ್ದು, ಉಳಿದ ತೆರವು ಕಾರ್ಯ ಸಕ್ರಿಯವಾಗಿ ಮುಂದುವರಿಯುತ್ತಿದೆ.
* ನಗರದಾದ್ಯಂತ 62ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿರುವ ಕುರಿತು ದೂರವಾಣಿ, ಸಹಾಯವಾಣಿ ಹಾಗೂ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ICCC) ಮೂಲಕ ದೂರುಗಳು ಸ್ವೀಕರಿಸಲ್ಪಟ್ಟಿವೆ.
* 3 ಕಡೆ ಗೋಡೆ ಕುಸಿತ, 105 ಕಡೆ ಮನೆಗಳಿಗೆ ನೀರು ನುಗ್ಗಿರುವುದು ಹಾಗೂ 1 ಕಡೆ ಮೂಲಸೌಕರ್ಯ ಹಾನಿ ವರದಿಯಾಗಿದೆ.
* ಆಲಿಕಲ್ಲು ಸಹಿತ ಮಳೆಯಿಂದ ಮರದ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರಿದ ಪರಿಣಾಮ, ಮಳೆ ನೀರು ಹರಿಯುವ ಗ್ರೇಟಿಂಗ್ಗಳಲ್ಲಿ ಎಲೆಗಳು ಸಿಲುಕಿಕೊಂಡು ಅನೇಕ ಪ್ರದೇಶಗಳಲ್ಲಿ ನೀರು ಚರಂಡಿಗಳಿಗೆ ಸರಾಗವಾಗಿ ಹರಿಯದೇ ರಸ್ತೆಗಳಲ್ಲಿ ನೀರು ನಿಂತಿದೆ.
* ನಗರ ಪಾಲಿಕೆಗಳ ಉಪವಿಭಾಗ ಮಟ್ಟದ ತಂಡಗಳನ್ನು ತಕ್ಷಣವೇ ನೀರು ನಿಂತ ಪ್ರದೇಶಗಳಿಗೆ ಕಳುಹಿಸಿ, ಗ್ರೇಟಿಂಗ್ಗಳು ಹಾಗೂ ಶೋಲ್ಡರ್ ಡ್ರೇನ್ಗಳನ್ನು ಸ್ವಚ್ಛಗೊಳಿಸಿ ನೀರು ಹರಿಯಲು ಅನುವು ಮಾಡಲಾಗಿದೆ.
* ಕೆ.ಆರ್ ವೃತ್ತ, ಮಡಿವಾಳ, ಸ್ಯಾಂಕಿ ರಸ್ತೆ, ಜಯದೇವ, ಯಮಲೂರು, ಶಂಕರನಾಗ್, ಟ್ಯಾನರಿ ರಸ್ತೆ ಹಾಗೂ ನಾಯಂಡಹಳ್ಳಿ ಕೆಳಸೇತುವೆ ಪ್ರದೇಶಗಳಲ್ಲಿ ನೀರು ತುಂಬಿದ್ದು, ಅಗತ್ಯವಿರುವ ಸ್ಥಳಗಳಲ್ಲಿ ಪಂಪ್ಗಳನ್ನು ಅಳವಡಿಸಿ ನೀರು ತೆರವುಗೊಳಿಸಲಾಗುತ್ತಿದೆ.
* ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಿಂದ 7 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ರೂ. 5.00 ಲಕ್ಷ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸಲಾಗುವುದು.
* ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಬನ್ನೇರುಘಟ್ಟ ರಸ್ತೆಯ ವೇಗಾ ಸಿಟಿ ಮಾಲ್ ಸಮೀಪ ಮಳೆಯ ವೇಳೆ ವಿದ್ಯುತ್ ತಂತಿ ತಗುಲಿ ಜೆ.ಡಿ. ಮರ ಕೊಳಗೇರಿ ನಿವಾಸಿ 35 ವರ್ಷದ ರಘು ಮೃತಪಟ್ಟಿದ್ದು, ಅವರ ಕುಟುಂಬಕ್ಕೂ ರೂ. 5.00 ಲಕ್ಷ ಪರಿಹಾರ ನೀಡಲಾಗುವುದು.
* ಬೆಂಗಳೂರು ಉತ್ತರ ನಗರ ಪಾಲಿಕೆಯ ಪುಲಕೇಶಿನಗರ ವಾರ್ಡ್ ಸಂಖ್ಯೆ 47ರ ವೀಲರ್ಸ್ ರಸ್ತೆಯ ಹೋಲಿ ಏಂಜಲ್ಸ್ ಶಾಲೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದಿದ್ದು, ತೆರವು ಕಾರ್ಯ ನಡೆಯುತ್ತಿದೆ.
* ಮಳೆಯ ಪರಿಣಾಮ ಹಾಗೂ ಮರಗಳು ಬಿದ್ದ ಪರಿಣಾಮ 8 ಕಡೆ ವಿದ್ಯುತ್ ಬೀದಿ ದೀಪದ ಕಂಬಗಳು ಹಾನಿಗೊಳಗಾಗಿದ್ದು, 5 ಕಡೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಜೊತೆಗೆ 1 ಮಿನಿ ಮಾಸ್ಟ್ ಧರೆಗುರುಳಿದ್ದು, ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಹಲವೆಡೆ ಬೀದಿ ದೀಪ ಸಂಪರ್ಕ ವ್ಯತ್ಯಯಗೊಂಡಿದ್ದು, ಸರಿಪಡಿಸಲಾಗುತ್ತಿದೆ.
* ಮಳೆಯ ಪರಿಣಾಮ 186 ಕಡೆ ವಿದ್ಯುತ್ ಕಂಬಗಳು ಹಾಗೂ 36 ಕಡೆ ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿ ವಿದ್ಯುತ್ ಸರಬರಾಜು ಅಸ್ತವ್ಯಸ್ತವಾಗಿದೆ. ಬೆಸ್ಕಾಂ ಇಲಾಖೆಯಿಂದ ಈಗಾಗಲೇ 112 ವಿದ್ಯುತ್ ಕಂಬಗಳು ಹಾಗೂ 18 ಟ್ರಾನ್ಸ್ಫಾರ್ಮರ್ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.
ಮುಂಗಾರು ಪೂರ್ವ ಸಿದ್ಧತೆಗಾಗಿ ಕೈಗೊಳ್ಳಬೇಕಾದ ಕ್ರಮಗಳು:
* ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಮಳೆ ನೀರುಗಾಲುವೆಗಳ (SWD) ಡೀಸಿಲ್ಟಿಂಗ್ ಹಾಗೂ ಪುನಶ್ಚೇತನ ಕಾರ್ಯಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವುದು.
* ವಿಶ್ವ ಬ್ಯಾಂಕ್ ನೆರವಿನಡಿ 173 ಕಿ.ಮೀ ಹೊಸ ಮಳೆ ನೀರುಗಾಲುವೆ ತಡೆಗೋಡೆ ಕಾಮಗಾರಿಗಳು ಹಾಗೂ 83 ಕಿ.ಮೀ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ.
* ಎನ್.ಡಿ.ಆರ್.ಎಫ್ ಅನುದಾನದಡಿ 31 ಪ್ರಮುಖ ಸ್ಥಳಗಳಲ್ಲಿ ಕಲ್ವರ್ಟ್ ನಿರ್ಮಾಣ.
* ಕೆರೆಗಳಲ್ಲಿ ನೀರಿನ ಮಟ್ಟ ನಿಯಂತ್ರಣಕ್ಕಾಗಿ 127 ಕಡೆ ಸ್ಲೂಯಿಸ್ ಗೇಟ್ಗಳ ಅಳವಡಿಕೆ.
* ಹೆಚ್ಚುವರಿ ಪಕ್ಕದ ಚರಂಡಿಗಳು ಹಾಗೂ ಕ್ರಾಸ್-ಡ್ರೈನೇಜ್ ಕಾಮಗಾರಿಗಳ ನಿರ್ಮಾಣ.
* ಪ್ರಮುಖ ಪ್ರದೇಶಗಳಲ್ಲಿ ಗ್ರೇಟೆಡ್ ಇನ್ಲೆಟ್ಗಳು ಹಾಗೂ ಸಿಲ್ಟ್ ಟ್ರ್ಯಾಪ್ಗಳ ಅಳವಡಿಕೆ.
* ಮುಂಗಾರು ಪೂರ್ವ ಡೀಸಿಲ್ಟಿಂಗ್ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವುದು.
* ಅತಿಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ತಂಡಗಳ ನಿಯೋಜನೆ.
PublicNext
30/04/2026 06:25 pm