ಹಾನಗಲ್: ‘ನೀರಿದೆ, ಪೈಪ್ಲೈನ್ ಇದೆ, ಆದರೂ ಬಾಯಾರಿಕೆ: ಮನೋಹರ ನಗರದಲ್ಲಿ ಜಲ ಸಂಕಷ್ಟ!’ ಎಂಬ ಶೀರ್ಷಿಕೆಯಡಿ ಬುಧವಾರ ‘ಪಬ್ಲಿಕ್ ನೆಕ್ಸ್ಟ್’ ಸುದ್ದಿ ಪ್ರಸಾರ ಮಾಡಿತ್ತು. ಈ ಸುದ್ದಿಗೆ ತಕ್ಷಣ ಸ್ಪಂದಿಸಿರುವ ಅಧಿಕಾರಿಗಳು, ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದಾರೆ.
ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಲ್ವೆಯಲ್ಲಾಪುರ ಗ್ರಾಮದ ಮನೋಹರ ನಗರದ ನಿವಾಸಿಗಳು ಕುಡಿಯುವ ನೀರಿಗಾಗಿ ತೀವ್ರ ಪರದಾಡುತ್ತಿದ್ದರು. ಮೂಲಸೌಕರ್ಯಗಳಿದ್ದರೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿರಲಿಲ್ಲ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಸವಿಸ್ತಾರವಾದ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಾನಗಲ್ ತಹಶೀಲ್ದಾರ್ ಎಸ್. ರೇಣುಕಾ ಹಾಗೂ ಜೆಜೆಎಂ ಅನುಷ್ಠಾನ ಅಧಿಕಾರಿ ಚಂದ್ರಶೇಖರ್ ನೆಗಳೂರ್ ಗುರುವಾರ ಕಾಲ್ವೆಯಲ್ಲಾಪುರಕ್ಕೆ ಭೇಟಿ ನೀಡಿದರು.
ನೀರು ಪೂರೈಕೆಯಲ್ಲಿನ ವ್ಯತ್ಯಯವನ್ನು ಪರಿಶೀಲಿಸಿದ ತಹಶೀಲ್ದಾರರು, ಬಾಳಂಬೀಡ ಪಿಡಿಒ ಟಿ.ಬಿ. ಮುಗಾನವರ ಅವರನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. "ಪೈಪ್ ಒಡೆದಿದೆ ಎಂಬ ಕ್ಷುಲ್ಲಕ ನೆಪ ಹೇಳಿ ಸಾರ್ವಜನಿಕರಿಗೆ ನೀರು ನಿಲ್ಲಿಸುವುದು ಸರಿಯಲ್ಲ" ಎಂದು ಕಿಡಿಕಾರಿದ ಅವರು, ತಕ್ಷಣವೇ ನಳದ ಮೂಲಕ ನೀರು ಪೂರೈಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಲಜೀವನ ಮಿಷನ್ (JJM) ಅಧಿಕಾರಿ ಚಂದ್ರಶೇಖರ ನೆಗಳೂರ ಅವರು ಕೊಳವೆ ಬಾವಿಗೆ ಮಾಡಲಾಗಿದ್ದ ಅವೈಜ್ಞಾನಿಕ ಕೇಬಲ್ ಜೋಡಣೆ ಹಾಗೂ ವೈರಿಂಗ್ ಅವ್ಯವಸ್ಥೆಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಇದನ್ನು ಸರಿಪಡಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನಿರ್ದೇಶನ ನೀಡಿದರು.
ಪಬ್ಲಿಕ್ ನೆಕ್ಸ್ಟ್ ವರದಿಯಿಂದಾಗಿ ಎಚ್ಚೆತ್ತುಕೊಂಡ ಆಡಳಿತ ಯಂತ್ರ, ಈಗ ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಲು ವೇಗವಾಗಿ ಕೆಲಸ ಆರಂಭಿಸಿದೆ.
ವರದಿ: ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್.
PublicNext
01/05/2026 07:19 pm
LOADING...