ಧಾರವಾಡ: ಜನಸಂಖ್ಯೆಗೆ ಅನುಗುಣವಾಗಿ ಮದ್ಯದ ಅಂಗಡಿಗಳನ್ನು ಹೆಚ್ಚಿಸಲು ಆಸಕ್ತಿ ತೋರುವ ರಾಜಕಾರಣಿಗಳು ಜನಸಂಖ್ಯೆಗೆ ತಕ್ಕಂತೆ ವಾಚನಾಲಯಗಳನ್ನು ಹೆಚ್ಚಿಸಲು ಆಸಕ್ತಿ ತೋರದಿರುವುದು ಬೇಸರದ ಸಂಗತಿ ಎಂದು ಮುಧೋಳದ ಖ್ಯಾತ ಶಸ್ತ್ರ ಚಿಕಿತ್ಸಕ ಹಾಗೂ ಸಾಹಿತಿ ಡಾ.ಶಿವಾನಂದ ಕುಬಸದ ಹೇಳಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಮಂಗಳವಾರ ಪ್ರೊ.ಕೆ.ಎಸ್.ದೇಶಪಾಂಡೆ ದತ್ತಿ ಕಾರ್ಯಕ್ರಮದಲ್ಲಿ "ನಾನು ನನ್ನ ಪುಸ್ತಕ ಪ್ರಪಂಚ" ವಿಷಯ ಕುರಿತು ಉಪನ್ಯಾಸ ನೀಡಿದರು. ಓದಿನಿಂದ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಓದುವ ಆಸಕ್ತಿ ಬೆಳೆಸಬೇಕು. ಪೂರಕ ವಾತಾವರಣ ಕಲ್ಪಿಸಬೇಕೆಂದರು.
ಕೆಲ ವರ್ಷಗಳ ಹಿಂದೆ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿಯೂ ವಾಚನಾಲಯಗಳಿದ್ದವು. ಆದರೆ ಈಗ ಅವು ಕಣ್ಮರೆಯಾಗಿವೆ. ನಾನು ಸಣ್ಣವನಿದ್ದಾಗ ನಮ್ಮ ಗ್ರಾಮದ ವಾಚನಾಲಯದಲ್ಲಿಯೇ ಓದುವ ರೂಢಿ ಬೆಳೆಸಿಕೊಂಡಿದ್ದೇನೆ. ಶಾಲಾದಿನಗಳಲ್ಲಿ ವಾಚನಾಲಯದಲ್ಲಿ ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುತ್ತ ಬೆಳೆದಿದ್ದೇನೆ. ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಪುಸ್ತಕಗಳನ್ನು ಓದುತ್ತಿದ್ದೆವು. ನಂತರ ಪುಸ್ತಕದ ಕುರಿತು ಚರ್ಚಿಸುತ್ತಿದ್ದೆವು ಎಂದರು.
ಪುಸ್ತಕ ಮಾನವ ನಿರ್ಮಿತ ಪವಾಡ. ಸಾಹಿತ್ಯದ ಉದ್ದೇಶ ಕೇವಲ ರಂಜನೆ ಮಾತ್ರವಲ್ಲ, ಅದರೊಂದಿಗೆ ಚಿಂತನೆ ಹಾಗೂ ಪರಿವರ್ತನೆ ಕೂಡ ಇರಬೇಕು. ಆಗ ಸಾಹಿತ್ಯಕ್ಕೆ ಸಾರ್ಥಕತೆ ಬರುತ್ತದೆ ಎಂದರು. ಹಲವು ವೈದ್ಯರು ವೈದ್ಯಕೀಯ ಕ್ಷೇತ್ರದ ಕುರಿತು ಬರೆಯುತ್ತಿದ್ದಾರೆ. ತಮ್ಮ ಅನುಭವಗಳನ್ನು ಕಥೆ, ಕಾವ್ಯದ ಮೂಲಕ ಓದುಗರಿಗೆ ನೀಡುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಒಡ್ಡೀನ ನಿರೂಪಿಸಿದರು.
Kshetra Samachara
05/05/2026 10:14 pm
LOADING...