ಮೊಳಕಾಲ್ಮುರು:-ಊರಲ್ಲಿ ಎರಡು ಸಾವಿರ ಜನ ಇದ್ದೇವೆ, ಇರುವ ಒಂದು ಮೋಟರ್ ಕೆಟ್ಟು ಹೋಗಿ ಎರಡೂರು ತಿಂಗಳಾಗಿದೆ. ಇದರಿಂದ ಒಂದು ಮೈಲಿ ನಡೆದು ಹೋಗಿ, ಸರದಿಯಲ್ಲಿ ನಿಂತು ನೀರು ತರಬೇಕಿದೆ ಸ್ವಾಮಿ ಎಂದು ಅಳಲು ತೋಡಿಕೊಳ್ಳುವ ಜನರು ಮೊಳಕಾಲ್ಮುರು ತಾಲೂಕಿನ ಬಿ.ಜಿ.ಕೆರೆ ಗ್ರಾಪಂ ವ್ಯಾಪ್ತಿಯ ಮೊಗಲಹಳ್ಳಿ ಗ್ರಾಮದ ಜನರ ಅಳಲು ಇದು. ಇದು ನಿನ್ನೆ, ಮೊನ್ನೆಯ ಸಮಸ್ಯೆ ಏನಲ್ಲ, ಎರಡೂರು ತಿಂಗಳಿಂದಲೂ ಇಲ್ಲಿನ ಜನರು ಹನಿ ನೀರಿಗೂ ಗ್ರಾಮದಿಂದ 1 ಕಿ.ಮೀ. ದೂರದಲ್ಲಿನ ಏಕೈಕ ನಲ್ಲಿ ಬಳಿ ತೆರಳಿ ಸರದಿಯಲ್ಲಿ ನಿಂತು ನೀರು ಹೊತ್ತು ತರುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಈ ಗ್ರಾಮವು ತಾಲೂಕಿನ ಯಾವುದೇ ಮೂಲೆಯಲ್ಲಿನ ಕುಗ್ರಾಮವಲ್ಲ, ರಾಜ್ಯ ಹೆದ್ದಾರಿ ಹಾದು ಹೋಗಿರುವ ಗ್ರಾಮ. ಇಲ್ಲಿನ ಜನರು ನೀರು ತರುವುದಕ್ಕಾಗಿಯೇ ಮನೆಗೊಂದು ತಳ್ಳುಗಾಡಿ ಖರೀದಿಸಿದ್ದಾರೆ. ಒಂದೆರಡು ಕೊಡಗಳಲ್ಲಿ ನೀರು ತಂದಲ್ಲಿ ಮನೆ ಮಂದಿಗೆ ಸಾಕಾಗದ ಕಾರಣ ಹಾಗೂ ದೂರದಿಂದ ಕೊಡ ಹೊತ್ತು ತರಲು ಸಾಧ್ಯವಾಗದೆ, ಇಲ್ಲಿ ತಳ್ಳುಗಾಡಿಗಳ ಸೇವೆ ಅತಿ ಮುಖ್ಯ ಎನ್ನುವಂತಾಗಿದೆ.
ವಾರಕ್ಕೆ ಎರಡು ಬಾರಿ ಈ ನಲ್ಲಿಯಲ್ಲಿ ನೀರು ಸರಬರಾಜಾಗುತ್ತದೆ. ನಾವು ನೀರು ನಲ್ಲಿಯಲ್ಲಿ ಜಿನುಗುವುದನ್ನು ಕಾಯ್ದು ನೀರು ಹೊತ್ತೊಯ್ಯಬೇಕಿದೆ. ಸ್ಥಳೀಯ ಆಡಳಿತ ಮಂಡಳಿ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ನಮ್ಮಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎಂದೂ ಯೋಚಿಸಿಲ್ಲ, ಜನಪ್ರತಿನಿಧಿಗಳು ವೋಟ್ ಪಡೆಯಲು ಮಾತ್ರ ನಮ್ಮ ಬಳಿಗೆ ಬರುತ್ತಾರೆ. ಆನಂತರ ಪತ್ತೆ ಇರುವುದಿಲ್ಲ, ನಾವು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕೋ ಅರ್ಥವಾಗುತ್ತಿಲ್ಲ ಎಂದು ಬೇಸರದಿಂದ ಮಾತನಾಡುತ್ತಿದ್ದಾರೆ ಇಲ್ಲಿನ ಜನರು.
ವರದಿ:ಎಚ್ ಮಹಾಂತೇಶ್
PublicNext
13/05/2026 01:21 pm
LOADING...