ಮೊಳಕಾಲ್ಮುರು: ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ 2026-27 ನೇ ಸಾಲಿನ ತಾಪಂ ಮೊದಲ ಸಾಮಾನ್ಯ ಸಭೆಯು ತಾಲೂಕಿನ ನಾನಾ ಗ್ರಾಮಗಳಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರವಾದ ಚರ್ಚೆಗಳಿಲ್ಲದೆ ನೀರಸವಾಗಿತ್ತು.
ಸಭೆಯಲ್ಲಿ ವರದಿ ಮಂಡಿಸಿ ಬಿಇಒ ಇ.ನಿರ್ಮಲಾದೇವಿ ಮಾತನಾಡಿ, ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಲ್ಲಿಯೂ ಕನ್ನಡ ಹಾಗೂ ಆಂಗ್ಲಾ ಮಾಧ್ಯಮ ಶಾಲೆಗಳನ್ನು ನಡೆಸಲಾಗುತ್ತದೆ. ಶಾಲಾ ಆರಂಭಕ್ಕೆ ಇಲಾಖೆಯು ಈಗಾಗಲೇ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಎಲ್ಲಾ ಶಾಲೆಗಳಲ್ಲಿಯೂ ಶಾಲಾ ಆರಂಭಕ್ಕೂ ಪೂರ್ವದಲ್ಲಿ ಪೋಷಕರ ಸಭೆಗಳನ್ನು ನಡೆಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿಕೊಂಡು ಎರಡೂ ಮಾಧ್ಯಮಗಳಲ್ಲಿ ಶಾಲೆಗಳನ್ನು ನಡೆಸಲಾಗುವುದು. ತಾಲೂಕಿನಲ್ಲಿ ಶಿಕ್ಷಕರ ಕೊರತ ಹೆಚ್ಚಿರುವ ಕಾರಣ ನಾವು ಈಗಾಗಲೇ ಅತಿಥಿ ಶಿಕ್ಷಕರ ಅವಶ್ಯಕತೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಕರ ಕೊರತೆ ಬಾರದಂತೆ ಶಾಲೆಗಳನ್ನು ನಡೆಸಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಪಟ್ಟಣ ವ್ಯಾಪ್ತಿಯಲ್ಲಿರುವ ಸರಕಾರಿ ಕ್ಷೇತ್ರ ಮಾದರಿ ಬಾಲಕರ ಶಾಲಾ ಕಟ್ಟಡಗಳ ಮಳೆ, ಗಾಳಿಗೆ ಬಿದ್ದಿವೆ. ಈ ಶಾಲೆಯು ತಾಪಂ ವ್ಯಾಪ್ತಿಗೆ ಒಳಪಡದ ಕಾರಣ ನಾವು ತಾಪಂ ಅನುದಾನವನ್ನು ಇಲಾಖೆಯಿಂದ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸ್ಥಳೀಯ ಪಪಂಗೆ ಪತ್ರ ಬರೆದು ಈ ಶಾಲೆಯ ಸ್ಥಿತಿಯನ್ನು ವಿವರಿಸಿ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಸೈಯದ್ ನಯೀಮ್, ತಾಪಂ ಇಒ ಎಚ್.ಹನುಮಂತಪ್ಪ, ವ್ಯವಸ್ಥಾಪಕ ನಂದೀಶ್ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
Kshetra Samachara
20/05/2026 08:09 pm
LOADING...