ನವದೆಹಲಿ: ವ್ಯಾಪಾರ ಮಾಡುವುದು ತಪ್ಪಲ್ಲ, ಆದರೆ ಆ ವ್ಯಾಪಾರದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕನಿಷ್ಠ ಜ್ಞಾನವೂ ಇಲ್ಲದ ವ್ಯಾಪಾರಿಯೊಬ್ಬನ ಬೇಜವಾಬ್ದಾರಿತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಅಂಗಡಿಯ ಗಲೀಜು ಹಾಗೂ ಬಳಸಿದ ಎಣ್ಣೆಯನ್ನು ನೇರವಾಗಿ ರಸ್ತೆಗೆ ಸುರಿದ ಪರಿಣಾಮ, ಅಪಘಾತ ಸಂಭವಿಸಿರುವ ಘಟನೆ ಬೆಳಕಿಗೆ ಬಂದಿದೆ.
ಗೂಡಂಗಡಿಯೊಂದರ ಮಾಲೀಕ ತಾನು ಬಳಸಿದ ಕರಕಲಾದ ಕರಿದ ಎಣ್ಣೆಯನ್ನು ಮುಲಾಜಿಲ್ಲದೇ ಮುಖ್ಯ ರಸ್ತೆಯ ಮೇಲೆಯೇ ಸುರಿಯುತ್ತಾನೆ. ರಸ್ತೆಯ ತಿರುವಿನಲ್ಲೇ ಈ ಎಣ್ಣೆ ಬಿದ್ದಿದ್ದರಿಂದ, ಆ ದಾರಿಯಾಗಿ ಬರುವ ಬೈಕ್ ಸವಾರ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ.
ಅದೃಷ್ಟವಶಾತ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ದೊಡ್ಡ ವಾಹನಗಳೇನಾದರೂ ಹಿಂದಿನಿಂದ ಬಂದಿದ್ದರೆ ಭೀಕರ ಪ್ರಾಣಾಪಾಯ ಸಂಭವಿಸುತ್ತಿತ್ತು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಸ್ಥಳೀಯ ಪಾಲಿಕೆ ಮತ್ತು ಪೊಲೀಸರು ಇಂತಹ ಬೇಜವಾಬ್ದಾರಿ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಭಾರಿ ದಂಡ ವಿಧಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
PublicNext
23/05/2026 11:51 am
LOADING...