ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯ ಕಲ್ಮೇಶ್ವರ ನಗರದಲ್ಲಿ ಮಣ್ಣು ಮಿಶ್ರಿತ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ವರದಿ ಪ್ರಸಾರ ಮಾಡಿದ್ದೇ ತಡ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ಹೌದು ! ಜಿಲ್ಲಾಧಿಕಾರಿ ಸ್ನೇಹಲ್.ಆರ್ ಖಡಕ್ ಸೂಚನೆ ಬಳಿಕ ಕೆ.ಯು.ಐ.ಡಿ.ಎಫ್.ಸಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ಸವಿತಾ ಕಟಿಗೆಣ್ಣವರ ಹಾಗೂ ತಾಂತ್ರಿಕ ಅಧಿಕಾರಿಗಳ ತಂಡ ಸೋಮವಾರ ಕಲ್ಮೇಶ್ವರ ನಗರಕ್ಕೆ ಖುದ್ದಾಗಿ ಭೇಟಿ ನೀಡಿ ನೀರು ಪೂರೈಕೆ ಪರಿಶೀಲನೆ ನಡೆಸಿದೆ.
ಕಲ್ಮೇಶ್ವರ ನಗರದ ಭಾಗದಲ್ಲಿ ಸರಬರಾಜಾಗುತ್ತಿರುವ ನೀರು ಕಲುಷಿತಗೊಂಡಿಲ್ಲ ಅದು ಕೇವಲ ಪೈಪ್ಲೈನ್ ರಿಪೇರಿಯಿಂದಾಗಿ ಬಂದಿರುವ ಮಣ್ಣು ಮಿಶ್ರಿತ ನೀರಾಗಿದೆ (Mud Water) ಎಂದು ಅಧಿಕಾರಿ ಸವಿತಾ ಕಟಿಗೆಣ್ಣವರ ತಿಳಿಸಿದ್ದಾರೆ.
ಇತ್ತೀಚೆಗೆ ಅಮ್ಮಿನಭಾವಿಯಿಂದ ಬರುವ ಮುಖ್ಯ ಲೈನ್ ಹಾಗೂ ದುಮ್ಮಾಡಿಯಿಂದ ಹೊನ್ನಾಪುರಕ್ಕೆ ಸಂಪರ್ಕಿಸುವ ನೀರಿನ ಪೈಪ್ಲೈನ್ಗಳಲ್ಲಿ ಎರಡು ಕಡೆ ಪ್ರಮುಖ ಸೋರಿಕೆಗಳು (Major Leakages) ಕಂಡುಬಂದಿದ್ದವು.
ಈ ಸಮಸ್ಯೆಯನ್ನು ಸರಿಪಡಿಸಲು ಒಂದೇ ದಿನ ಶಟ್ಡೌನ್ ತೆಗೆದುಕೊಂಡು ಕಟ್ಟುನಿಟ್ಟಿನ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಪೈಪ್ಲೈನ್ ರಿಪೇರಿ ಮುಗಿದ ತಕ್ಷಣ ಆರಂಭದಲ್ಲಿ ನೀರು ಸರಬರಾಜು ಮಾಡುವಾಗ, ಪೈಪ್ಗಳಲ್ಲಿ ಶೇಖರಣೆಯಾಗುವ ಮಣ್ಣು ಮಿಶ್ರಿತ ನೀರು ಬರುವುದು ಸಹಜ ತಾಂತ್ರಿಕ ಪ್ರಕ್ರಿಯೆಯಾಗಿದೆ ಎಂದು ವಿವರಿಸಿದರು.
ಆರಂಭದಲ್ಲಿ ಮಣ್ಣಿನ ನೀರು ಬರದಂತೆ ತಡೆಯಲು ಇಲಾಖೆಯ ವತಿಯಿಂದ ಫ್ಲಶ್ ಔಟ್ (ಸ್ಕವರ್) ಮಾಡಲಾಗಿತ್ತಾದರೂ, ಪೈಪ್ಲೈನ್ ಉದ್ದ ಹೆಚ್ಚಿರುವುದರಿಂದ ನಿವಾಸಿಗಳ ನಲ್ಲಿಗಳಿಗೆ ತಲುಪುವಾಗ ಸ್ವಲ್ಪ ಪ್ರಮಾಣದ ಮಣ್ಣಿನ ನೀರು ಬಂದಿದೆ. ಇದನ್ನು ಕಲುಷಿತ ನೀರು ಎಂದು ಭಾವಿಸಿ ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2026 02:04 pm