ಶಿರಸಿ: ಸುದೀರ್ಘ ಇತಿಹಾಸ ಹೊಂದಿರುವ ತಾಲೂಕಿನ ಬನವಾಸಿ, ಸಮಗ್ರ ಕನ್ನಡಿಗರ ಅಸ್ಮಿತೆಗೆ ಸಾಕ್ಷಿಯಾಗಿ, ಕದಂಬರ ಕೊಡುಗೆಯ ಸಾಂಸ್ಕೃತಿಕ ಕೊಂಡಿಯಾಗಿದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿನ ಐತಿಹಾಸಿಕ ದೇಗುಲವು ಸೊರುತ್ತಿದ್ದರೂ, ಇದನ್ನು ಸರಿಪಡಿಸಲು ಸಮರ್ಪಕ ಕ್ರಮ ಕೈಗೊಳ್ಳದಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. **ಈ ನಿರ್ಲಕ್ಷ್ಯವು ಪ್ರಜಾಪ್ರಭುತ್ವದ ಅಣಕವಾಗಿ ಕನ್ನಡಿಗರ ಮನಸ್ಸಿಗೆ ಎಳೆದ ಬರೆಯಾಗಿದೆ ಎಂದು ಬನವಾಸಿ ದೇಗುಲದ ವ್ಯವಸ್ಥಾಪನ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ, ಹಿರಿಯ ಸಾಹಿತಿ ಹಾಗೂ ಶಿಕ್ಷಣ ತಜ್ಞ ಡಾ. ಜಿ.ಎ. ಹೆಗಡೆ ಸೋಂದಾ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ದುಸ್ಥಿತಿಗೆ ಪುರಾತತ್ವ ಇಲಾಖೆ ಮತ್ತು ಸಂಬಂಧಪಟ್ಟ ರಾಜಕಾರಣಿಗಳ ಬೇಜವಾಬ್ದಾರಿ ನಡೆ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತತ್ವ ಇಲಾಖೆಯ ಜವಾಬ್ದಾರಿ
ದೇಗುಲದ ಯಥಾಸ್ಥಿತಿಯನ್ನು ರಕ್ಷಿಸುವ ಹೊಣೆ ಹೊತ್ತ ಪುರಾತತ್ವ ಇಲಾಖೆಯು, ನಿಯಮದಂತೆ ದೇವಾಲಯದ ಸುತ್ತಮುತ್ತ ೧೦೦ ಅಡಿ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ರಾಜ್ಯ ಸರ್ಕಾರಕ್ಕಾಗಲೀ ಅಥವಾ ವ್ಯವಸ್ಥಾಪನಾ ಸಮಿತಿಗಾಗಲೀ ಅನುಮತಿ ನೀಡುವುದಿಲ್ಲ. ಹೀಗಾಗಿ, ದೇವಾಲಯ ಸೋರುತ್ತಿರುವಾಗ ಅದನ್ನು ಸರಿಪಡಿಸುವ ಸಂಪೂರ್ಣ ಹೊಣೆ ಪುರಾತತ್ವ ಇಲಾಖೆಯದ್ದೇ ಆಗಿದೆ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ತಾನು ಕಾರ್ಯನಿರ್ವಹಿಸದೆ, ಕಾರ್ಯನಿರ್ವಹಿಸಲು ಇತರರಿಗೂ ಅವಕಾಶ ನೀಡದೆ ಇರುವ ಇಲಾಖೆಯ ಈ ದಿವ್ಯ ನಿರ್ಲಕ್ಷ್ಯ ಖಂಡನೀಯ ಎಂದು ಡಾ. ಹೆಗಡೆ ಸ್ಪಷ್ಟಪಡಿಸಿದ್ದಾರೆ.
ಕನ್ನಡಿಗರ ಪಾಲುದಾರಿಕೆ ಮತ್ತು ಹೋರಾಟಕ್ಕೆ ಬೆಂಬಲ
ದೇವಾಲಯದ ಯಥಾಸ್ಥಿತಿ ಕಾಪಾಡಿ, ಅದನ್ನು ಅಭಿವೃದ್ಧಿಪಡಿಸುವಲ್ಲಿ ಸಮಗ್ರ ಕನ್ನಡಿಗರೂ ಪಾಲುದಾರರಾಗಿದ್ದಾರೆ ಎಂಬುದನ್ನು ಸಂಬಂಧಪಟ್ಟವರು ಅರಿತು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಡಾ. ಹೆಗಡೆ ಆಗ್ರಹಿಸಿದ್ದಾರೆ. ಬನವಾಸಿಯ ಅಭಿವೃದ್ಧಿಗಾಗಿ ಹೋರಾಡುತ್ತಿರುವ ಹೋರಾಟ ಸಮಿತಿಯ ಪ್ರಯತ್ನಗಳನ್ನು ಮತ್ತು ದೇವಾಲಯ ವ್ಯವಸ್ಥಾಪನಾ ಸಮಿತಿಯು ಕೈಗೊಂಡ ಕ್ರಮಗಳನ್ನು ಅವರು ಬೆಂಬಲಿಸಿ, ಪ್ರಶಂಸಿಸಿದ್ದಾರೆ.
ಬೌದ್ಧಿಕ ವಲಯಕ್ಕೆ ಡಾ. ಹೆಗಡೆ ಅವರ ಕರೆ
ನಾಡಿನ ಬೌದ್ಧಿಕ ವಲಯದ ಪ್ರಾಜ್ಞರು ಈ ಹೋರಾಟಕ್ಕೆ ಬೆಂಬಲ ನೀಡಿ, ಮಧುಕೇಶ್ವರ ದೇವಾಲಯಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಧಾನಿ ಮತ್ತು ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲು ಮುಂದಾಗಬೇಕೆಂದು ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಯಕ್ಷಗಾನ ವಿದ್ವಾಂಸ ಮತ್ತು ಕಲಾವಿದರಾದ ಡಾ. ಜಿ.ಎ. ಹೆಗಡೆ ಸೋಂದಾ ಒತ್ತಾಯಿಸಿದ್ದಾರೆ.
PublicNext
27/05/2026 05:20 pm