ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದಕ್ಕೆ ತಾಜಾ ಉದಾಹರಣೆ ತಡಸಿನಕೊಪ್ಪದ ಬಳಿ ನಡೆದ ಫೈರಿಂಗ್ ಘಟನೆಯೇ ಕಾರಣ. ಹೀಗಾಗಿ ಅವಳಿನಗರದ ಪೊಲೀಸ್ ಆಯುಕ್ತರಾಗಿರುವ ಎನ್.ಶಶಿಕುಮಾರ್ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ತಡಸಿನಕೊಪ್ಪ ಗ್ರಾಮದ ಕೆಲ ಗ್ರಾಮಸ್ಥರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪೊಲೀಸ್ ಆಯುಕ್ತ ಶಶಿಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಮೀಷನರ್ ಹಟಾವೋ ಹುಬ್ಬಳ್ಳಿ, ಧಾರವಾಡ ಬಚಾವೋ ಎಂಬ ಘೋಷಣೆಗಳನ್ನು ಕೂಗಿದರು.
ತಡಸಿನಕೊಪ್ಪದಲ್ಲಿ ರೈತನ ಭೂಮಿ ಕಬಳಿಸುವ ಉದ್ದೇಶದಿಂದಲೇ ಗುಂಡಿನ ದಾಳಿ ಆಗಿದೆ. ಫೈರಿಂಗ್ ಮಾಡಿದ ಸುಂದರ್ ಪೌಲ್ನನ್ನು ಪೊಲೀಸರು ಬಂಧಿಸಿಲ್ಲ. ಆತ ಓಡಿ ಹೋಗುವಂತೆ ಪೊಲೀಸರೇ ಮಾಡಿದ್ದಾರೆ. ಪೊಲೀಸರು ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹೀಗಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರನ್ನು ತಕ್ಷಣವೇ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಗುಂಡು ತಾಕಿದ ಯುವಕನ ಕುಟುಂಬದವರಿಗೆ ಪೊಲೀಸರು ಯಾವುದೇ ವಿಷಯಕ್ಕೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಹೀಗಾದರೆ ಸಾಮಾನ್ಯರಿಗೆ ರಕ್ಷಣೆ ಎನ್ನುವುದು ಎಲ್ಲಿದೆ? ಎಂದು ವಿಠ್ಠಲ ವಾಲೀಕಾರನ ಕುಟುಂಬಸ್ಥರು ತಮ್ಮ ಆಕ್ರೋಶ ಹೊರ ಹಾಕಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/05/2026 06:28 pm
LOADING...