ನಂಜನಗೂಡು : ತಾಲೂಕಿನ ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ವಾಮಾಚಾರ ನಡೆದಿರುವುದು ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದಿದ್ದು, ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಸಂಘದ ಕಚೇರಿಯ ದಾಖಲೆಗಳಿರುವ ಬೀರುವಿನಲ್ಲಿ ವಾಮಾಚಾರ ಮಾಡಲಾಗಿದ್ದು, ಗೊಂಬೆ, ಅರಿಶಿನ ಕುಂಕುಮ ಹಾಗೂ ಮಡಿಕೆ, ಪತ್ರ, ಕಾರ್ಯದರ್ಶಿ ಮಹದೇವಪ್ರಸಾದ್ ಭಾವಚಿತ್ರ, ಸೇರಿದಂತೆ ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿದೆ.
ಸುಮಾರು ಒಂದು ವರ್ಷದ ಹಿಂದೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ತಲೆದೂರಿದ್ದವು. ಅಂದಿನ ಕಾರ್ಯದರ್ಶಿ ಮಹೇಶ್ ಅವರ ವಿರುದ್ಧ ಹಣ ದುರುಪಯೋಗ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಮಹೇಶ್ ಅವರನ್ನು ಸೇವೆಯಿಂದ ವಜಾ ಮಾಡಿ, ಅವರ ಸ್ಥಾನಕ್ಕೆ ಮಹದೇವಪ್ರಸಾದ್ ಅವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.
ಹಾಲಿ ಕಾರ್ಯದರ್ಶಿ ಮಹದೇವಪ್ರಸಾದ್ ಅವರು, "ಸಹಕಾರ ಸಂಘಕ್ಕೆ ನಷ್ಟ ಉಂಟಾಗಲಿ, ನನ್ನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿ, ನಾನು ಮರಣ ಹೊಂದಲಿ ಎಂಬ ದುರುದ್ದೇಶದಿಂದ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷರು ನಿರಂತರವಾಗಿ ನನ್ನ ಮೇಲೆ ವಾಮಾಚಾರ ನಡೆಸಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಕಾರ್ಯದರ್ಶಿ ಮತ್ತು ಮಾಜಿ ಅಧ್ಯಕ್ಷರು ತಮ್ಮ ಮೇಲೆ ದುಷ್ಪರಿಣಾಮ ಬೀರಲು ಯತ್ನಿಸುತ್ತಿದ್ದಾರೆ ಎಂದು ಹಾಲಿ ಕಾರ್ಯದರ್ಶಿ ಮಹದೇವಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.
ಡೈರಿಯಲ್ಲಿ ವಾಮಾಚಾರ ಮಾಡಿದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯದರ್ಶಿ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.
PublicNext
29/05/2026 08:50 pm
LOADING...